ಕಲಬುರ್ಗಿ: ‘ಶಿವಪಥವನು ಅರಿಯಲು ಗುರುಪಥವೇ ಮೊದಲು. ಗುರು– ಶಿಷ್ಯರ ಸಂಬಂಧ ಇಂದಿನದಲ್ಲ. ಅದಕ್ಕೆ ಅತ್ಯಂತ ಪ್ರಾಚೀನ ಪರಂಪರೆ ಇದೆ’ ಎಂದು ಕಡಗಂಚಿಯ ವೀರಭದ್ರ ಶಿವಾಚಾರ್ಯರು ನುಡಿದರು.
ನಗರದ ಸೊಗಸನಗೇರಿಯ ಗುರುಶಾಂತ ಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಶರನ್ನವರಾತ್ರಿ ದಸರಾ ದರ್ಬಾರ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘ಗುರುವಿನ ಕರುಣೆಗಾಗಿ ಶಿಷ್ಯ ಹಂಬಲಿಸಬೇಕು. ಇಂದಿನ ಸಮಾಜದಲ್ಲಿ ಬಣ್ಣಧಾರಿ ಗುರುಗಳನ್ನು ಕಂಡು ಕೆಲವರು ದಾರಿ ತಪ್ಪುತ್ತಿದ್ದಾರೆ. ನಿಜವಾದ ಹೂ ಅರಿಸಿ ದುಂಬಿ ಬರುವಂತೆ ಸುಜ್ಞಾನದ ನಿಜರೂಪವನ್ನು ಹುಡುಕಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು. ಹೂವಿಗೂ ಸೂರ್ಯನಿಗೂ ಯಾವ ಸಂಬಂಧ ವಿದೆಯೋ ಅದೇ ಸಂಬಂಧ ಶಿಷ್ಯನಿಗೂ ಮತ್ತು ಗುರುವಿಗೂ ಇದೆ. ಸೂರ್ಯನ ಬೆಳಕಿಲ್ಲದೇ ಹೂ ಅರಳುವುದಿಲ್ಲ ಗುರುವಿಲ್ಲದೇ ನಮ್ಮ ಅಂತರಾತ್ಮ ಅರಳಲು ಸಾಧ್ಯವಿಲ್ಲ’ ಎಂದರು.
‘ಶ್ರೇಷ್ಠ-ಕನಿಷ್ಠ, ಬಡವ-ಬಲ್ಲಿದ, ಪಾಪಿ-ಪುನೀತ ಎನ್ನದೇ ಎಲ್ಲರಿಗೂ ಸಮಾನ ಬೆಳಕು ಕೊಡುವ ಸೂರ್ಯನಂತೆ ಗುರುವಾದವನು ತನ್ನ ಕರುಣೆ ಕಾರುಣ್ಯದಿಂದ ಹರಿಸಿ, ಜನ್ಮ ಜನ್ಮಾಂತರ ಪಾಪ– ತಾಪಗಳೆಲ್ಲ ಕಳೆದು ಪರಿಶುದ್ಧನಾಗಿ ಮಾಡುವವನೇ ನಿಜ ಗುರು’ ಎಂದು ನುಡಿದರು.
ಕಾಳಗಿಯ ಚಂದ್ರಮೌಳಿ ಸ್ವಾಮೀಜಿ ಕಾಳಗಿ, ಕಡಗಂಚಿಯ ಪಂಪಾಪತಿ ದೇವರು, ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಮಚೀಂದ್ರನಾಥ ಮೂಲಗೆ, ಮಾತನಾದರು. ಸಿದ್ರಾಮಪ್ಪ ಆಲಗೂಡಕರ್, ಅಮೃತಪ್ಪ ಮಲಕಪ್ಪಗೌಡ, ಈರಣ್ಣ ಹೊನ್ನಶೆಟ್ಟಿ, ಅಣ್ಣಾರಾವ್ ಬೆಣ್ಣೂರ, ಪ್ರಿಯಾಂಕಾ ಬಿರಾದಾರ, ಸಿದ್ದುಸ್ವಾಮಿ, ಕಾಶೀನಾಥ ನಾಯಿಕೋಡಿ, ಶಿವಾನಂದ ಹೂಗಾರ, ಶಿವಪತಿ ವನರವಾಡಿ ಇದ್ದರು.
ಬಾಬೂರಾವ ಕೋಬಾಳ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸುಂಟನೂರಿನ ಪುರಾಣಿಕರಾದ ಸಿದ್ಧೇಶ್ವರ ಶಾಸ್ತ್ರಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.