ADVERTISEMENT

ಪಾಲಿಕೆಯ ನಿವೃತ್ತ ನೌಕರರಿಗೆ ಪಿಂಚಣಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 16:01 IST
Last Updated 13 ಆಗಸ್ಟ್ 2024, 16:01 IST
ವೀರಭದ್ರ ಸಿಂಪಿ
ವೀರಭದ್ರ ಸಿಂಪಿ   

ಕಲಬುರಗಿ: ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಲ್ಲಿ ಹತ್ತು ವರ್ಷ ದಿನಗೂಲಿಯಾಗಿ ಸೇವೆ ಸಲ್ಲಿಸಿ ಕಾಯಮಾತಿಗೊಂಡ ನಿವೃತ್ತ ನೌಕರರಿಗೆ ಏಳೆಂಟು ವರ್ಷಗಳಾದರೂ ಪಿಂಚಣಿ ನೀಡುತ್ತಿಲ್ಲ. ಕೂಡಲೇ ಈ ಬಗ್ಗೆ ತೀರ್ಮಾನ ಕೈಗೊಂಡು ಪಿಂಚಣಿ ಹಣ ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಒಕ್ಕೂಟ ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಿದೆ.

ಈ ಕುರಿತು ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರಧಾನ ಕಾರ್ಯದರ್ಶಿ ಅಕ್ರಂ ಅಹ್ಮದ್, ಖಜಾಂಚಿ ಶ್ರೀಕಂಠ ಶೆಟ್ಟಿ, ‘ರಾಜ್ಯದ ವಿವಿಧ ಪಾಲಿಕೆಗಳಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ಆರಂಭಿಸಿ ನಂತರ ಸಕ್ರಮಗೊಂಡ ಸುಮಾರು 800 ನೌಕರರಿದ್ದಾರೆ. ನಿವೃತ್ತರ ಪಿಂಚಣಿ ಸೌಲಭ್ಯಕ್ಕಾಗಿ ಸರ್ಕಾರದ ಆದೇಶದ ಅನ್ವಯ ಅರ್ಹತಾದಾಯಕ ಸೇವೆ ಸೇರಿಸಿ ಪಿಂಚಣಿ ಕೊಡಬೇಕಿದೆ. ಆದರೆ, ಏಳೆಂಟು ವರ್ಷ ಕಳೆದರೂ ಪಿಂಚಣಿ ನೀಡುತ್ತಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.

ಪಾಲಿಕೆಯ ನಿವೃತ್ತ ಪೌರಕಾರ್ಮಿಕರು ಮತ್ತು ಅಧಿಕಾರಿ, ನೌಕರರಿಗೆ ಅರ್ಹತಾದಾಯಕ ಸೇವೆ ಸರ್ಕಾರಿ ನಿಯಮ 248/ಎರಂತೆ ನಿವೃತ್ತಿಯೊಂದಿಗೆ ಪಿಂಚಣಿ ಸೌಲಭ್ಯ ಕೊಟ್ಟಿಲ್ಲ. ಆದರೆ, ಇದೇ ನಿಯಮದಡಿಯಲ್ಲಿ ಬೇರೆ ಇಲಾಖೆಗಳಲ್ಲಿ ಹೀಗೆ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ನಿವೃತ್ತಿಯೊಂದಿಗೆ ಪಿಂಚಣಿ ಸೇರಿಸಿ ಕೊಡಲಾಗುತ್ತಿದೆ. ಆದರೆ, ಪಾಲಿಕೆ ನೌಕರರಿಗೆ ಮಾತ್ರ ಹಲವು ಬಾರಿ ಬೇಡಿಕೆ ಇಟ್ಟರೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ADVERTISEMENT

ಪಿಂಚಣಿ ಸೌಲಭ್ಯ ವಿಳಂಬವಾಗಲು ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. 10 ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ವೈಯಕ್ತಿಕ ಅರ್ಜಿಗಳನ್ನು ಪರಿಗಣಿಸಿ ಅವರಿಗೆ ಶೀಘ್ರ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.