ಕಮಲಾಪುರ: ತಾಲ್ಲೂಕಿನ ಸೊಂತ ಗ್ರಾಮದ ಸುತ್ತಲೂ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹದ ನೀರು ಮನೆಗೆ ನುಗ್ಗಿವೆ.
ಗ್ರಾಮದ ಪಕ್ಕದ ಸರ್ವೆ ಸಂಖ್ಯೆ 316 ರಲ್ಲಿ ಕೆರೆ ಇದೆ. ಈ ಹಿಂದೆ ಕೆರೆ ತುಂಬಿದರೆ ಕೋಡಿಯಿಂದ ಹರಿದು ಹೋಗುವ ನೀರು ನಾಲೆ ಮೂಲಕ ಆಚೆ ತಲುಪುತ್ತಿದ್ದವು. ಕಳೆದೆರಡು ವರ್ಷಗಳ ಹಿಂದೆ ಈ ನಾಲೆ ಮುಚ್ಚಿಹಾಕಿದ್ದಾರೆ. ಕೆರೆ ಬಂಡ ಒಂದು ಬದಿಯಲ್ಲಿ ಒಡೆದಿದ್ದಾರೆ. ಹೀಗಾಗಿ ಕೋಡಿ ಮೂಲಕ ಹರಿಯುತ್ತಿದ್ದ ನೀರು ಒಡೆದ ಬಂಡನಿಂದ ಹೊರಬರುತ್ತಿದ್ದು, ನೇರವಾಗಿ ಗ್ರಾಮದೊಳಗೆ ನುಗ್ಗುತ್ತಿದೆ. ಹಳ್ಳ ಹರದಿದಂತೆ ಗ್ರಾಮದಲ್ಲಿ ಪ್ರವಾಹ ಉಂಟಾಗುತ್ತಿದೆ. ಮನೆಯಿಂದ ಹೊರ ಕಾಲಿಟ್ಟರೆ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ.
‘ಕೆರೆ ದುರಸ್ಥಿಗೊಳಿಸಿ ನೀರು ಪ್ರವಾಹ ಮೊದಲಿನಂತೆ ನಾಲೆಗೆ ತೆರಳುವಂತೆ ಮಾಡಬೇಕು. ಕೆರೆಯ ಬಂಡ್ ಒಡೆದವಯರು, ನಾಲೆ ಮುಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಹಾಗೂ ತಹಶೀಲ್ದಾರ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ ಇದು ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಗ್ರಾಮದ ಮಧ್ಯದ ನಾಲೆಯ ಪ್ರವಾಹವೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿದೆ. ವಾರದ ಸಂತೆ ಇದ್ದಾಗ ಮಳೆ ಬಂತೆಂದರೆ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತರಕಾರಿ, ಬಟ್ಟೆ, ಗೊಡಂಗಡಿಗಳೆಲ್ಲ ಕೊಚ್ಚಿ ಹೋಗುತ್ತವೆ.
‘ಗುಡ್ಡದ ಮೇಲಿನಿಂದ ನೀರೂ ಹರಿದು ಬಂದು ಗ್ರಾಮದಳಗೆ ನುಗ್ಗುತ್ತವೆ. ಮುಚ್ಚಿರುವ ಕೆರೆಯ ನಾಲೆ ಅಗೆದು ತೆಗೆಯಬೇಕು. ಕೆರೆ ಬಂಡ್ ಮರು ನಿರ್ಮಾಣ ಮಾಡಬೇಕು. ಗ್ರಾಮದ ಸುತ್ತಲೂ ದೊಡ್ಡ ಚರಂಡಿ ನಿರ್ಮಾಣ ಮಾಡಬೇಕು. ಎಲ್ಲ ನೀರು ಆ ಚರಂಡಿ ಮೂಲಕವೇ ನಾಲೆಗೆ ಬಂದು ಸೇರುವಂತೆ ಸಂಪರ್ಕ ಒದಗಿಸಬೇಕು. ಗ್ರಾಮದ ಮಧ್ಯದಲ್ಲಿ ಹರಿಯುವ ನಾಲೆಯ ಇಕ್ಕೆಲಗಳಲ್ಲಿ ಬೆಳೆದ ಜಾಲಿ ಕಂಟಿ ಸ್ವಚ್ಛಗೊಳಿಸಬೇಕು. ನಾಲೆಯೊಳಗಿನ ಹೂಳು ತೆಗೆದು ನೀರು ಸರಾಗವಾಗಿ ಸಾಗುವಂತೆ ಮಾಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.