ಕಲಬುರ್ಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಇಲ್ಲಿನ ಗಂಜ್ ಕಾಲೊನಿಯಲ್ಲಿರುವ ಶರಭಯ್ಯ ಗಾಧಾ ಕನ್ಯಾ ಪ್ರೌಢಶಾಲೆಯಲ್ಲಿ ಶುಕ್ರವಾರ, ಅಣಕು ಪ್ರದರ್ಶನ ಮಾಡಲಾಯಿತು.
ಕಲಬುರ್ಗಿ ಉತ್ತರ ವಲಯಕ್ಕೆ ಬರುವ 33 ಪರೀಕ್ಷಾ ಕೇಂದ್ರಗಳ ಕೋಣೆ ಮೇಲ್ವಿಚಾರಕರು, ಮುಖ್ಯ ಧೀಕ್ಷಕರು, ಶಿಕ್ಷಕ– ಶಿಕ್ಷಕಿಯರೂ ಇದರಲ್ಲಿ ಪಾಲ್ಗೊಂಡರು. ಕೊರೊನಾ ವೈರಾಣು ಉಪಟಳದ ಮಧ್ಯೆಯೂ ವಿದ್ಯಾರ್ಥಿಗಳ ಸುರಕ್ಷತೆ ಕಾಪಾಡಿಕೊಂಡು ಪರೀಕ್ಷೆಯನ್ನು ಹೇಗೆ ನಡೆಸಬೇಕು ಎಂಬ ಪೂರ್ಣ ಪ್ರಮಾಣದ ತಯಾರಿ ಮಾಡಿಕೊಂಡು, ಅದರ ವಿಡಿಯೊ ತುಣುಕು ಕಳುಹಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಒಂದೊಂದು ಮಾದರಿ ಪರೀಕ್ಷಾ ಕೇಂದ್ರದಲ್ಲಿ ಈ ಅಣಕು ಪ್ರದರ್ಶನ ನಡೆಸಲಾಯಿತು.
ಇದಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಿಲ್ಲ. ಬದಲಾಗಿ, ಪರೀಕ್ಷಾ ಸಿಬ್ಬಂದಿ ಹಾಗೂ ಶಿಕ್ಷಕರೇ ವಿದ್ಯಾರ್ಥಿಗಳಾಗಿ ಪಾತ್ರ ನಿರ್ವಹಿಸಿದರು. ಇಬ್ಬರು ಶಿಕ್ಷಕಿಯರು ನರ್ಸ್ಗಳಾಗಿ, ಒಬ್ಬ ಶಿಕ್ಷಕ ಪೊಲೀಸ್ ಸಿಬ್ಬಂದಿ ಆಗಿ, ಒಬ್ಬ ಸ್ಕೌಟ್ಸ್ ಶಿಕ್ಷಕರಾಗಿ, ಒಬ್ಬರು ಮೊಬೈಲ್ ಸ್ವಾಧೀನಾಧಿಕಾರಿ ಆಗಿ ಕಾರ್ಯನಿರ್ವಹಿಸಿದರು. ವಿಶೇಷವೆಂದರೆ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಾಗಿ ನೇಮಕಗೊಂಡ 33 ಮಂದಿಯನ್ನೇ ವಿದ್ಯಾರ್ಥಿಗಳಾಗಿ ಮಾಡಿ, ಅವರಿಂದ
ಪ್ರಾಯೋಗಿಕ ಕ್ರಿಯೆ
ನಡೆಸಲಾಯಿತು.
ಪರೀಕ್ಷೆ ಸಮಯ ಮುಗಿದ ಮೇಲೆ ಕೊಠಡಿಯಿಂದ ಹೇಗೆ ಹೊರಗೆ ಬರಬೇಕು ಎಂಬುದಕ್ಕೂ ನಿಯಮ ಮಾಡಿದ್ದು, ವಿದ್ಯಾರ್ಥಿಗಳು ಅದನ್ನೂ ಅನುಸರಿಸುವಂತೆ ಸಿಬ್ಬಂದಿ ಸೂಚಿಸಿದರು.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಅರ್ಧ ತಾಸಿನ ವಿಡಿಯೊ ಸಿದ್ಧಪಡಿಸಿ ಶಿಕ್ಷಣ ಇಲಾಖೆಯ ಕಲಬುರ್ಗಿ ವಿಭಾಗದ ಹೆಚ್ಚುವರಿ ಆಯುಕ್ತ ನಳಿನ್ ಅತುಲ್ ಅವರಿಗೆ
ಸಲ್ಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.