ADVERTISEMENT

ತಕ್ಷಣ ಹೆಸರು ಕಾಳು ಖರೀದಿ ಆರಂಭಿಸಿ: ಕಾಂಗ್ರೆಸ್‌

ಸುದ್ದಿಗೋಷ್ಠಿಯಲ್ಲಿ ಬಿ.ಆರ್‌.ಪಾಟೀಲ, ಡಾ.ಶರಣಪ್ರಕಾಶ ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:35 IST
Last Updated 19 ಆಗಸ್ಟ್ 2020, 16:35 IST
ಬಿ.ಆರ್‌.ಪಾಟೀಲ
ಬಿ.ಆರ್‌.ಪಾಟೀಲ   

ಕಲಬುರ್ಗಿ: ‘ಮುಂಗಾರು ಹಂಗಾಮಿನ ಹೆಸರು, ಉದ್ದು ಬೆಳೆಗಳು ಕಟಾವಿಗೆ ಬಂದಿದ್ದು, ವಾರದಲ್ಲಿ ಹೆಸರು ಕಾಳನ್ನು ಮಾರುಕಟ್ಟೆಗೆ ರೈತರು ತರಲಿದ್ದಾರೆ. ಹೀಗಾಗಿ ತಕ್ಷಣವೇ ಸರ್ಕಾರ ಮಾರುಕಟ್ಟೆ ಪ್ರವೇಶಿಸುವ ಮೂಲಕ ಬೆಂಬಲ ಬೆಲೆಯಲ್ಲಿ ಹೆಸರು ಮತ್ತು ಉದ್ದು ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡರಾದ ಬಿ.ಆರ್‌.ಪಾಟೀಲ, ಡಾ.ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಈಗಾಗಲೇ ಹಲವು ಕಡೆಗಳಲ್ಲಿ ರೈತರು ರಾಶಿ ಮಾಡಿದ್ದು, ಮಾರುಕಟ್ಟೆಗೆ ತಮ್ಮ ಉತ್ಪನ್ನವನ್ನು ತಂದ ತಕ್ಷಣ ಬೆಲೆ ಕಡಿಮೆ ಮಾಡಲಾಗುತ್ತದೆ, ಹೀಗಾಗಿ ಮಿತಿಯನ್ನು ಹೇರದೆ, ಎಲ್ಲ ಉತ್ಪನ್ನಗಳನ್ನು ಖರೀದಿಸಲು ಕೂಡಲೇ ಶುರು ಮಾಡಬೇಕು’ ಎಂದರು.

‘ಕೊರೊನಾದಿಂದ ಎಲ್ಲ ಕ್ಷೇತ್ರಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಮಾತ್ರ ಸುರಕ್ಷಿತ ಮತ್ತು ಲಾಭದಾಯಕವಾಗಿ ಉಳಿದಿದೆ. ಈ ವಲಯವನ್ನು ಉಳಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ತಪ್ಪು ಮಾಡಿದರೆ, ಮುಂದೆ ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಳ್ಳಲಿದೆ. ಹೀಗಾಗದಂತೆ ತಡೆಯಲು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಹೆಸರಿಗೆ ₹ 7196 ಬೆಂಬಲ ಬೆಲೆ ನಿಗದಿಯಿದ್ದು ಅದನ್ನು ₹ 8 ಸಾವಿರಕ್ಕೆ ಹೆಚ್ಚಿಸಬೇಕು. ಉದ್ದಿನ ಬೆಂಬಲ ಬೆಲೆಯನ್ನು ₹ 6 ಸಾವಿರದಿಂದ ₹ 7 ಸಾವಿರಕ್ಕೆ ಹೆಚ್ಚಿಸಬೇಕು ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ಸಂಜೀವ ಐರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.