ADVERTISEMENT

ಯುವಜನರ ಮಧ್ಯೆ ಬಸವತತ್ವ ಚರ್ಚೆಯಾಗಲಿ

ರಾವೂರು: ಪಂಚಲೋಹದ ಬಸವೇಶ್ವರ ಮೂರ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:31 IST
Last Updated 29 ಮೇ 2025, 14:31 IST
ವಾಡಿಯಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿದರು. ಸಿದ್ಧಲಿಂಗ ಸ್ವಾಮೀಜಿ, ಬಿ.ಜಿ.ಪಾಟೀಲ, ಶಿವಾನಂದ ಪಾಟೀಲ ಇತರರಿದ್ದರು 
ವಾಡಿಯಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿದರು. ಸಿದ್ಧಲಿಂಗ ಸ್ವಾಮೀಜಿ, ಬಿ.ಜಿ.ಪಾಟೀಲ, ಶಿವಾನಂದ ಪಾಟೀಲ ಇತರರಿದ್ದರು    

ವಾಡಿ: ‘ಸತ್ಯವನ್ನು ಓರೆಗೆ ಹಚ್ಚುವ ಮನಸ್ಥಿತಿಯುಳ್ಳ ಯುವಜನರ ಮಧ್ಯೆ ಬಸವತತ್ವಗಳು ಚರ್ಚೆಗೆ ಬಂದು ಮತ್ತಷ್ಟು ವಿಸ್ತರಗೊಳ್ಳಲಿ’ ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.

ರಾವೂರ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸ್ಥಾಪಿಸಲಾದ ವಿಶ್ವಗುರು ಬಸವಣ್ಣನವರ ಪಂಚಲೋಹದ ಪುತ್ಥಳಿ ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಬಸವಾಭಿಮಾನಿಗಳು ಬಸವೇಶ್ವರರ ಮೂರ್ತಿ ಸ್ಥಾಪಿಸಿ ಮತ್ತೆ ಅದರತ್ತ ಹೊರಳಿ ನೋಡುವುದಿಲ್ಲ. ಪ್ರತಿದಿನ ಬಸವಣ್ಣನವರ ಮುಖದರ್ಶನವಾಗಬೇಕು. ನಮ್ಮಲ್ಲಿ ಬಸವ ತತ್ವಗಳನ್ನು ಹೆಚ್ಚು ಮೂಡಿಸಬೇಕು. ಮೂರ್ತಿ ಸುತ್ತಲ ಪರಿಸರ ಸ್ವಚ್ಚವಾಗಿಡಲು ಕ್ರಮ ಹಾಗೂ ಮೂರ್ತಿಗೆ ಸುರಕ್ಷತೆ ಒದಗಿಸಬೇಕು’ ಎಂದರು.

ADVERTISEMENT

‘ಮಕ್ಕಳಲ್ಲಿ ಬಸವ ಚಿಂತನೆ ಮೂಡಿಸಲು ವಚನ ಸ್ಪರ್ಧೆ ಹಮ್ಮಿಕೊಳ್ಳಬೇಕು. ವಿಶೇಷ ಉಪನ್ಯಾಸಗಳನ್ನು ಆಯೋಜಿಸಿ ಶರಣರ ಸಂದೇಶಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಮೂರ್ತಿ ಸ್ಥಾಪಿಸಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಮಾತನಾಡಿದರು. ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಲಿಂಗಾರೆಡ್ಡಿ ಬಾಸರೆಡ್ಡಿ, ಶಿವಾನಂದ ಪಾಟೀಲ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಪಿಎಸ್‌ಐ ಕೆ.ತಿರುಮಲೇಶ, ನಾಗರೆಡ್ಡಿ ಪಾಟೀಲ ಕರದಾಳ, ಶ್ರೀನಿವಾಸ ಸಗರ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ, ಸಾಹೇಬಗೌಡ ತುಮಕೂರ, ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೇದ್, ಅಣ್ಣಾರಾವ ಬಾಳಿ, ಬಸವರಾಜ ಮಾಕಾ, ಈಶ್ವರ ಬಾಳಿ ಹಾಗೂ ಗ್ರಾಮದ ಸಾವಿರಾರು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು. ಸಿದ್ಧಲಿಂಗ ಬಾಳಿ ಪ್ರಾಸ್ತಾವಿಕ ಮಾತನಾಡಿದರು. ಶರಣು ಜ್ಯೋತಿ ನಿರೂಪಿಸಿದರು. ಸಿದ್ಧಲಿಂಗೇಶ್ವರ ಮಠದಿಂದ ಬಸವೇಶ್ವರ ವೃತ್ತದವರೆಗೆ ಗ್ರಾಮಸ್ಥರು ವಚನಗಾಯನ ಮೂಲಕ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.