ADVERTISEMENT

ಉದ್ಯಮಿಗಳಿಂದ ಬ್ಯಾಂಕ್ ಆರಂಭ ಪ್ರಸ್ತಾವಕ್ಕೆ ಎಸ್‌ಯುಸಿಐ ವಿರೋಧ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 6:10 IST
Last Updated 28 ನವೆಂಬರ್ 2020, 6:10 IST
ಎಚ್‌.ವಿ.ದಿವಾಕರ್
ಎಚ್‌.ವಿ.ದಿವಾಕರ್   

ಕಲಬುರ್ಗಿ: ಕೈಗಾರಿಕಾ ಮನೆತನಗಳಿಗೆ ಬ್ಯಾಂಕುಗಳನ್ನು ಆರಂಭಿಸಲು ಅನುಮತಿ ನೀಡುವ ಭಾರತೀಯ ರಿಜರ್ವ್ ಬ್ಯಾಂಕ್ ಪ್ರಸ್ತಾಪಕ್ಕೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷವು ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ. ದಿವಾಕರ್, ‘ಟಾಟಾ, ಬಿರ್ಲಾ, ಅಂಬಾನಿ, ಮಹೀಂದ್ರಾ ಮೊದಲಾದ ಕೈಗಾರಿಕಾ ಮನೆತನಗಳಿಗೆ, ‘ಅವರ ಅನುಭವವನ್ನು, ಆಡಳಿತ ನೈಪುಣ್ಯವನ್ನು ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ತಂತ್ರಗಾರಿಕೆಯ ದಿಕ್ಕನ್ನು ತರುವ' ನೆಪದೊಂದಿಗೆ, ಬ್ಯಾಂಕುಗಳನ್ನು ತೆರೆಯಲು ಆರ್‌ಬಿಐ ಅನುಮತಿ ನೀಡಲು ತೀರ್ಮಾನಿಸಿರುವುದು ಬ್ಯಾಂಕುಗಳ ಗ್ರಾಹಕರಿಗೆ ಮತ್ತು ಒಟ್ಟಾರೆ ಜನಸಾಮಾನ್ಯರಿಗೆ ಒಂದು ವಿನಾಶಕಾರಿ ಭವಿಷ್ಯದ ಸೂಚನೆಯಾಗಿದೆ. ಬಿಜೆಪಿ ಸರ್ಕಾರ ಹಸಿರು ನಿಶಾನೆ ತೋರಿಸಿರುವ ಈ ನಡೆಯು ಆಳುವ ಹಣಕಾಸು ಸರ್ವಾಧಿಕಾರವನ್ನು ಇನ್ನಷ್ಟು ಬಲಪಡಿಸುವುದರಲ್ಲಿ ಸಂಶಯವಿಲ್ಲ’ ಎಂದಿದ್ದಾರೆ.

‘ಬ್ಯಾಂಕುಗಳಲ್ಲಿ ಅಂದಾಜು ₹ 20 ಲಕ್ಷ ಕೋಟಿಯಷ್ಟಿರುವ ವಸೂಲಾಗದ ಸಾಲದ (ಎನ್.ಪಿ.ಎ) ಬಹುಭಾಗಕ್ಕೆ ಕಾರಣವಾಗಿರುವ ಈ ಕಾರ್ಪೊರೇಟ್ ಮನೆತನಗಳೇ ಬ್ಯಾಂಕುಗಳನ್ನು ತೆರೆದರೆ ಅಲ್ಲಿ ಸಂಗ್ರಹವಾಗುವ ಠೇವಣಿಗಳನ್ನು ತಮ್ಮ ಸಾಲದ ಮರುಪಾವತಿಗೆ ಬಳಸುವ ಮೂಲಕ ತಮ್ಮ ಹೊರೆಯನ್ನು ಜನರಿಗೆ ವರ್ಗಾಯಿಸುವ ಸಾಧ್ಯತೆ ದಟ್ಟವಾಗಿದೆ. ಇಂದು ಮಾರುಕಟ್ಟೆ ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಹಿಂಜರಿತ ಮತ್ತು ವಸೂಲಾಗದ ಸಾಲದ ಬಿಕ್ಕಟ್ಟಿನಿಂದ ಪಾರಾಗಲು ಬಿಜೆಪಿ ನೇತೃತ್ವದ ಸರ್ಕಾರವು ಜಾಗತೀಕರಣದ ನೀತಿಗನುಗುಣವಾಗಿ, ಆಳುವ ಏಕಸ್ವಾಮ್ಯ ಬಂಡವಾಳಶಾಹಿ ವರ್ಗದ ಹಿತದೃಷ್ಟಿಯಿಂದ ಖಾಸಗೀಕರಣದ ಹುಚ್ಚು ಹೊಳೆಯಲ್ಲಿದೆ. ಹಾಗೂ ಅದಕ್ಕಾಗಿ ಜನರ ಹಣವನ್ನು ದುರ್ಬಳಕೆ ಮಾಡುವ ಕ್ರಿಮಿನಲ್ ಕೃತ್ಯಗಳು ಹಲವು ಪಟ್ಟು ಏರಿಕೆಯಾಗಲಿವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.