ADVERTISEMENT

ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಸಲಹೆ: ಡಾ.ಅನಿಲಕುಮಾರ ಬಿಡವೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 5:02 IST
Last Updated 29 ಮೇ 2022, 5:02 IST
ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಶನಿವಾರ ನಡೆದ ಕಾಂಕ್ರೆಟ್ ಮಿಶ್ರಣದ ವಿನ್ಯಾಸ ಕಾರ್ಯಾಗಾರದಲ್ಲಿ ವಿವಿಯ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಮಾತನಾಡಿದರು
ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಶನಿವಾರ ನಡೆದ ಕಾಂಕ್ರೆಟ್ ಮಿಶ್ರಣದ ವಿನ್ಯಾಸ ಕಾರ್ಯಾಗಾರದಲ್ಲಿ ವಿವಿಯ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಮಾತನಾಡಿದರು   

ಕಲಬುರಗಿ: ‘ಸಿವಿಲ್‌ ಎಂಜಿನಿಯರ್ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಅತಿ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಿಸಬಹುದು ಎಂಬುದನ್ನು ಸಾಧಿಸಿ ತೋರಿಸಬೇಕು’ ಎಂದುಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ನಗರದಲ್ಲಿ ಶನಿವಾರ ನಡೆದ ‘ಕಾಂಕ್ರೀಟ್ ಮಿಶ್ರಣದ ವಿನ್ಯಾಸ’ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‌‘ದೇಶದ ಶೇ 40ರಷ್ಟು ಜನರು ಮಾತ್ರ ಸ್ವಂತ ಸೂರು ಹೊಂದಿದ್ದಾರೆ. ಶೇ 20ರಷ್ಟು ಜನ ರಸ್ತೆಯ ಮೇಲೆ ಜೀವನನಡೆಸುತ್ತಿದ್ದಾರೆ. ಹಾಗಾಗಿ, ಸಿವಿಲ್‌ ಎಂಜಿನಿಯರ್‌ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಅತಿ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವ ದಿಸೆಯಲ್ಲಿ ಆಸಕ್ತಿ ತೋರಬೇಕು’ ಎಂದರು.

ADVERTISEMENT

‘ಸಂಶೋಧನೆಯಲ್ಲಿ ಹೊಸ ತಂತ್ರಜ್ಞಾನದ ಜತೆಗೆನಾವೀನ್ಯತೆ, ಸಾಮರ್ಥ್ಯ ಮತ್ತು ಗುಣಮಟ್ಟದೊಂದಿಗೆ ಕಟ್ಟಡ ನಿರ್ಮಿಸಬೇಕು. ಈ ಮೂಲಕ ಬಡವರಿಗೆ ಸೂರು ಕಟ್ಟಿಸಿಕೊಳ್ಳಲು ನೆರವಾಗಬೇಕು’ ಎಂದರು.

‘ಕಟ್ಟಡ ನಿರ್ಮಾಣದಲ್ಲಿ ಕಾಂಕ್ರೇಟ್ ಮಿಶ್ರಣ ಬಹು ಮುಖ್ಯವಾಗಿದೆ. ಐಎಸ್‌10262:2019 ಅನ್ವಯ ಹೊಸ ವಿನ್ಯಾಸದೊಂದಿಗೆ ಮಿಶ್ರಣ ಮಾಡಲು ಕಲಿಯುವಂತೆ’ ಸೂಚಿಸಿದರು.

ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎಸ್.ಎಸ್. ಅವಂತಿ ಮಾತನಾಡಿ, ‘ತಪ್ಪು ಅಭ್ಯಾಸಗಳಿಂದ ಹೊರಬಂದು, ನೀರು ಮತ್ತು ಸಿಮೆಂಟ್‌ನ ಅನುಪಾತ ಅರಿತುಕೊಳ್ಳಬೇಕು. ಇದನ್ನು ಕಟ್ಟಡ ಕಾರ್ಮಿಕರಿಗೂಮನದಟ್ಟು ಮಾಡಬೇಕು. ಇಲ್ಲವಾದರೆ ನೂರು ವರ್ಷ ಬಾಳುವ ಕಟ್ಟಡ 50 ವರ್ಷದಲ್ಲಿ ಶಿಥಿಲಗೊಳ್ಳುತ್ತದೆ’ ಎಂದು ಅವರು ತಿಳಿಸಿದರು.

ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವಿ.ಡಿ. ಮೈತ್ರಿ, ‘ದೇಶದಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್‌ ಕೋರ್ಸ್‌ ಆರಂಭವಾಗಿದ್ದು, ಸರ್ ಎಂ. ವಿಶ್ವೇಶ್ವರಯ್ಯ ಪ್ರಥಮ ಸಿವಿಲ್ ಎಂಜಿನಿಯರ್‌ ಆಗಿ ತೇರ್ಗಡೆಯಾದರು’ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಅಲ್ಟ್ರಾಟೆಕ್ ಸಿಮೆಂಟ್‌ನ ಎಂಜಿನಿಯರ್ ರಾಮ್ ಪಂತ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಿ.ಎಸ್. ಪಾಟೀಲ, ರಾಜಶೇಖರ ಯರಗೋಳ, ಶೀತಲ್ ಬಿರಾದರ ಇದ್ದರು. ಪ್ರೊ. ಪೂನಮ್ ರಾಣಿ ನಿರೂಪಿಸಿ, ಸ್ವಾಗತಿಸಿದರು.

*
ಸಿವಿಲ್‌ ಎಂಜಿನಿಯರ್‌ಗಳು ನೀರು ಮತ್ತು ಸಿಮೆಂಟ್‌ ಅನುಪಾತ ಅರಿತುಕೊಂಡು ಅದನ್ನು ಕಟ್ಟಡ ಕಾರ್ಮಿಕರಿಗೂ ಮನದಟ್ಟು ಮಾಡಿಕೊಟ್ಟರೆ ಕಟ್ಟಡದ ಬಾಳಿಕೆಯು ದೀರ್ಘವಾಗುತ್ತದೆ.
-ಎಸ್.ಎಸ್. ಅವಂತಿ,ಶರಣಬಸವ ವಿವಿ ಸಿವಿಲ್ ಎಂಜಿನಿಯರಿಂಗ್ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.