ಕಲಬುರ್ಗಿ: ‘ಈ ಬಾರಿಯ ಬಿಸಿಲಿನ ಧಗೆ ಮಿತಿ ಮೀರಿದ್ದರಿಂದ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವ ಕಾರ್ಮಿಕರ ಸಂಕಷ್ಟ ನಿವಾರಿಸಲು ರಾಜ್ಯ ಸರ್ಕಾರ ಕೆಲಸದ ಅವಧಿಯಲ್ಲಿ ರಿಯಾಯಿತಿ ನೀಡಿದೆ. ಈ ರಿಯಾಯಿತಿ ರಾಜ್ಯದ 14 ಜಿಲ್ಲೆಗಳಿಗೆ ಅನ್ವಯಿಸುತ್ತಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕದ ಏಲೂ ಜಿಲ್ಲೆಗಳು ಸೇರಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಶ್ ಸಾಸಿ ತಿಳಿಸಿದ್ದಾರೆ.
‘ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ತಾಪಮಾನದ ಪ್ರಮಾಣ 40ರಿಂದ 42 ಡಿಗ್ರಿ ಸೆಲ್ಸಿಯಸ್ಗೆ ಏರಿದೆ. ಇದು ವಾಡಿಕೆಗಿಂದ 10 ದಿನ ಮುಂಚಿತವಾಗಿಯೇ ಉಂಟಾದ ಪರಿಣಾಮ. ಉರಿಬಿಸಿಲಿನ ಜತೆಗೆ, ಬಿಸಿಗಾಳಿಯ ವೇಗ ಕೂಡ ಹೆಚ್ಚಾಗಿದೆ. ಇದರಿಂದ ದುಡಿಯುವ ಜನರಿಗೆ ಸಂಕಷ್ಟ ಎದುರಾಗಿದೆ. ಕಾರ್ಮಿಕರ ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಇದು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಏಪ್ರಿಲ್ ಹಾಗೂ ಮೇ ತಿಂಗಳ ಕೆಲಸದ ಅವಧಿಯಲ್ಲಿ ಶೇ 30ರಷ್ಟು, ಜೂನ್ ತಿಂಗಳಲ್ಲಿ ಶೇ 20ರಷ್ಟು ಅವಧಿ ಕಡಿತ ಮಾಡಲಾಗಿದೆ. ಆದರೆ, ಕೂಲಿಯ ಸಂಬಳ ಮಾತ್ರ ಪೂರ್ಣಪ್ರಮಾಣದಲ್ಲಿ ಸಿಗಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.