ADVERTISEMENT

ಪತಿಯ ಕಾಲು ಮುರಿಯಲು ಸುಪಾರಿ : ಪತ್ನಿ ಸೇರಿ ನಾಲ್ವರ ಬಂಧನ

ಅಕ್ರಮ ಸಂಬಂಧದ ಅನುಮಾನ; ಪತ್ನಿ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 14:32 IST
Last Updated 7 ಫೆಬ್ರುವರಿ 2025, 14:32 IST
ಉಮಾದೇವಿ
ಉಮಾದೇವಿ   

ಕಲಬುರಗಿ: ‘ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪತ್ನಿಯೇ ಪತಿಯ ಕಾಲು ಮುರಿಯಲು ಸುಪಾರಿ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಅನುಮಾನದಿಂದ ಗಂಡನ ಕಾಲು ಮುರಿಸಿದ್ದಾಳೆ’ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ ತಿಳಿಸಿದರು.

‘ಜನವರಿ 18ರಂದು ರಾತ್ರಿ ನಗರದ ಆರ್ಚಿಡ್‌ ಮಾಲ್‌ ಹಿಂಭಾಗದ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಅತ್ತರ್ ಕಾಂಪೌಂಡ್ ನಿವಾಸಿ ವೆಂಕಟೇಶ ಮಾಲಿ ಪಾಟೀಲ (62) ಅವರನ್ನು ಮೂವರು ಅಪರಿಚಿತರು ಅಡ್ಡಗಟ್ಟಿ ಕಲ್ಲು ಮತ್ತು ಬಡಿಗೆಗಳಿಂದ ಕಾಲುಗಳಿಗೆ ಹೊಡೆದು ಹಣ ಕಿತ್ತುಕೊಂಡು ಹೋಗಿದ್ದರು. ಆರೋಪಿಗಳು ಬಲವಾಗಿ ಹೊಡೆದಿರುವ ಕಾರಣ ಅವರ ಎರಡೂ ಕಾಲುಗಳು ಮುರಿದು ಹೋಗಿವೆ. ನಡೆಯಲು ಬರುವುದಿಲ್ಲ. ನಗರದ ಆಸ್ಪತ್ರೆಯೊಂದರಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಶರಣಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

 ‘ಹಲ್ಲೆ ನಡೆದ ಕೆಲ ಹೊತ್ತಿನಲ್ಲಿಯೇ ಉಮಾದೇವಿಯವರಿಗೆ ಮೊಬೈಲ್‌ ಕರೆ ಮಾಡಿ ನಿಮ್ಮ ಗಂಡ ಆರ್ಚಿಡ್ ಮಾಲ್‌ ಹಿಂಭಾಗದ ರಸ್ತೆಯಲ್ಲಿ ಬೈಕ್‌ನೊಂದಿಗೆ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ವೆಂಕಟೇಶ ಅವರ ಮಗ ಪಿಯೂಷ್ ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೆ ಜನವರಿ 19ರಂದು ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು. 

ADVERTISEMENT

‘ಬ್ರಹ್ಮಪುರ ಠಾಣೆ ಪಿಐ ಸೋಮಲಿಂಗಪ್ಪ ಕಿರದಳ್ಳಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಈ ತಂಡ ಜ.27ರಂದು ಪ್ರಕರಣದ ಆರೋಪಿಗಳಾದ ಜಗತ್ ಬಡಾವಣೆಯ ಆರೀಫ್ (39), ಮನೋಹರ (36), ಶಹಾಬಜಾರ್‌ ತಾಂಡಾದ ಶಿವಶಕ್ತಿನಗರದ ಸುನೀಲ (21) ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತು. ವೆಂಕಟೇಶ ಅವರ ಪತ್ನಿಯೇ ಸುಪಾರಿ ನೀಡಿದ ಕುರಿತು ಬಾಯಿಬಿಟ್ಟಿದ್ದರು. ಆರೋಪಿಗಳ ಹೇಳಿಕೆ ಆಧರಿಸಿ ವೆಂಕಟೇಶ ಅವರ ಪತ್ನಿ ಉಮಾದೇವಿ (61) ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಸುಪಾರಿ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದರು.

ಅಕ್ರಮ ಸಂಬಂಧದ ಅನುಮಾನ: ‘ವೆಂಕಟೇಶ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಅನುಮಾನ ಉಮಾದೇವಿ ಅವರ ಮನಸ್ಸಿನಲ್ಲಿ ಮನೆ ಮಾಡಿತ್ತು. ಆದ್ದರಿಂದ ಗಂಡನ ಕಾಲುಗಳನ್ನು ಮುರಿಸಿ ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ಮಾಡಬೇಕು ಎಂದು ಸುಪಾರಿ ನೀಡಿದ್ದರು’ ಎಂದು ಹೇಳಿದರು.

ಆರೀಫ್
ಮನೋಹರ
ಸುನೀಲ

₹50 ಸಾವಿರ ಮುಂಗಡ

‘ವೆಂಕಟೇಶ ಅವರ ಕಾಲುಗಳನ್ನು ಮುರಿಯಲು ಪತ್ನಿ ಉಮಾದೇವಿ ₹5 ಲಕ್ಷಕ್ಕೆ ಸುಪಾರಿ ನೀಡಿದ್ದರು. ₹50 ಸಾವಿರ ಮುಂಗಡವಾಗಿ ನೀಡಿದ್ದರು. ಉಮಾದೇವಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೊಬೈಲ್‌ ಹಾಗೂ ನಗದು ಜಪ್ತಿ ಮಾಡಲಾಗಿದೆ. ಪಿಐ ಸೋಮಲಿಂಗಪ್ಪ ನೇತೃತ್ವದ ತಂಡದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ಗಳಾದ ಶಿವಪ್ರಕಾಶ ಕೆಸುರಾಯ ಕಾನ್‌ಸ್ಟೆಬಲ್‌ಗಳಾದ ರಾಮು ಪವಾರ ನವೀನಕುಮಾರ ಇದ್ದರು’ ಎಂದು ಶರಣಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.