
ಕಮಲಾಪುರ: ‘ಹೊಸ ತಾಲ್ಲೂಕು ಕೇಂದ್ರವಾದ ಕಮಲಾಪುರದಲ್ಲಿ ತಾಲ್ಲೂಕು ಮಟ್ಟದ ಕಚೇರಿಗಳ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ’ ಎಂದು ತಹಶೀಲ್ದಾರ್ ಮೊಹಮ್ಮದ ಮೋಸಿನ ಅಹಮ್ಮದ ತಿಳಿಸಿದರು.
ಪಟ್ಟಣದ ಗುರುಶಾಂತಪ್ಪ ಮಾಲಿಪಾಟೀಲ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಿಸಾನ್ ಯೋಜನೆ ಮೂಲಕ ರೈತರ ಖಾತೆಗೆ ನೆರವಿನ ಹಣ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ರೈತರಿಗೆ ಬೆಳೆ ವಿಮೆ ಪರಿಹಾರ ಸೇರಿ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಶ್ರಮಿಸಲಾಗುತ್ತಿದೆ. ಪ್ರಜಾಸೌಧ, ತಾಲ್ಲೂಕು ಆಸ್ಪತ್ರೆ, ಕುಡಿಯುವ ನೀರು, ಭೂವ್ಯಾಜ್ಯ, ಭೂಸ್ವಾಧೀನ ಸೇರಿದಂತೆ ವಿವಿಧ ಸಮಸ್ಯೆಗಳ ಸಾವಿರಾರು ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ತಾಲ್ಲೂಕಿನ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಗಣರಾಜ್ಯೋತ್ಸವದಂದು ನಮ್ಮ ಹಕ್ಕುಗಳ ಜೊತೆ ಕರ್ತವ್ಯಗಳನ್ನು ನಿಭಾಯಿಸುವ ಪ್ರತಿಜ್ಞೆ ಮಾಡೋಣ ಎಂದರು.
ಕಲಬುರಗಿ ಎಂಪಿಎಚ್ಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಾರುತಿ ಬೇಂದ್ರೆ ವಿಶೇಷ ಉಪನ್ಯಾಸ ನೀಡಿದರು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ತಾವರಗೇರಾ ಸರ್ಕಾರಿ ಉರ್ದು ಶಾಲೆ ವಿದ್ಯಾರ್ಥಿನಿ ಮಹೇಕ ಅಕ್ಬರ್ ಹಾಗೂ ಕಮಲಾಪುರ ತಾಲ್ಲೂಕಿನ ಜೀವಣಗಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಸುಹಾಸಿನಿ ಸಿದ್ದಪ್ಪ ಅವರಿಗೆ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗ್ರೇಡ್ 2 ತಹಶೀಲ್ದಾರ ಶಿವಕುಮಾರ ಶಾಬಾ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ, ತಾ.ಪಂ ಇಒ ಮಂಜುನಾಥ ಪಾಟೀಲ, ಪ.ಪಂ ಮುಖ್ಯಾಧಿಕಾರಿ ಸಂಜಯಕುಮಾರ ಕೋಳಿಗೇರಿ, ಅನುಜಕುಮಾರ, ಅಂಬದಾಸ ಜಮಾದಾರ, ಶರಣಬಸವಪ್ಪ ಜಾಲಳ್ಳಿ, ಮುಖಂಡರಾದ ರೇವಪ್ಪ ಬಮ್ಮಣ, ಜೀವನರೆಡ್ಡಿ, ಅಮೃತ ಗೌರೆ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.