ADVERTISEMENT

ಮಾಚನಾಳ ತಾಂಡಾ ವಾಸ್ತವ್ಯ: ಎತ್ತಿನ ಬಂಡಿಯಲ್ಲಿ ಸಚಿವ ಆರ್. ಅಶೋಕ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 14:15 IST
Last Updated 17 ಜನವರಿ 2023, 14:15 IST
ಆರ್‌. ಅಶೋಕ್‌ ಅವರನ್ನು ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆತರುತ್ತಿರುವುದು
ಆರ್‌. ಅಶೋಕ್‌ ಅವರನ್ನು ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆತರುತ್ತಿರುವುದು    

ಕಲಬುರಗಿ: ಗ್ರಾಮ ವಾಸ್ತವ್ಯ ಮಾಡಲು ತಾಲ್ಲೂಕಿನ ಮಾಚನಾಳ ತಾಂಡಾಕ್ಕೆ ಮಂಗಳವಾರ ಸಂಜೆ ಬಂದ ಕಂದಾಯ ಸಚಿವ ಆರ್. ಅಶೋಕ ಅವರನ್ನು ಎತ್ತಿನ ಬಂಡಿಯಲ್ಲಿ ಅದ್ಧೂರಿ ಮೆರವಣಿಗೆ ‌ಮಾಡಲಾಯಿತು.

ತಾಂಡಾದ ಪ್ರವೇಶ ದ್ವಾರಕ್ಕೆ ಬರುತ್ತಿದ್ದಂತೆಯೇ ಜೆಸಿಬಿ ಯಂತ್ರದ ಮೇಲಿದ್ದ ಯುವಕರು ಸಚಿವರತ್ತ ಹೂಗಳನ್ನು ಹಾಕಿದರು.

ಸ್ಥಳೀಯ ಶಾಸಕರೂ ಆದ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ರೇವೂರ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ. ರಾಜೀವ್ ಸಚಿವರೊಂದಿಗೆ ಎತ್ತಿನ ಸಾಥ್ ನೀಡಿದರು.

ADVERTISEMENT

ತಾಂಡಾ ನಿವಾಸಿಗಳು ಸಚಿವರಿಗೆ ಕವಡೆ, ಕನ್ನಡಿಯ ಭಾಗಗಳಿಂದ ತಯಾರಿಸಿದ ಶಾಲನ್ನು ಹಾಕಿ ಗೌರವಿಸಿದರು. ನಂತರ ಸಂತ ಸೇವಾಲಾಲ ಮತ್ತು ಜಗದಂಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಇದೇ 19ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಯ ಮಳಖೇಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 58 ಸಾವಿರಕ್ಕೂ ಅಧಿಕ ತಾಂಡಾ ನಿವಾಸಿಗಳಿಗೆ ಮನೆಯ ಹಕ್ಕುಪತ್ರ ವಿತರಿಸಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಸಚಿವರು ತಾಂಡಾದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಸುಮಾರು 800 ಜನಸಂಖ್ಯೆ ಇರುವ ಮಾಚನಾಳ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಸಚಿವರು ರಾತ್ರಿ ಕಳೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.