ADVERTISEMENT

ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪರಿಶಿಷ್ಟ ವಿದ್ಯಾರ್ಥಿನಿ ಮೇಲೆ ಶಿಕ್ಷಕ ಹಲ್ಲೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 16:54 IST
Last Updated 5 ಅಕ್ಟೋಬರ್ 2021, 16:54 IST
   

ಕಲಬುರ್ಗಿ: ಕಾಳಗಿ ತಾಲ್ಲೂಕಿನ ರೇವಗ್ಗಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ನಡೆಸುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪರಿಶಿಷ್ಟ ವಿದ್ಯಾರ್ಥಿನಿ ಮೇಲೆ ದೈಹಿಕ ಶಿಕ್ಷಣ ಶಿಕ್ಷಕ ಮಲಕಪ್ಪ ಹಲ್ಲೆ ನಡೆಸಿದ್ದಾರೆ.

‘ಗಾಂಧಿ ಜಯಂತಿ ಕಾರ್ಯಕ್ರಮ ಆಚರಿಸಲು ಶಾಲೆಯನ್ನು ಸ್ವಚ್ಛಗೊಳಿಸಲು ಉದ್ದೇಶಿಸಲಾಗಿತ್ತು. ಈ ಸಂದರ್ಭದಲ್ಲಿ ಹೇಳಿದಷ್ಟು ಸ್ವಚ್ಛತಾ ಕೆಲಸ ಮಾಡಲಿಲ್ಲ ಎಂಬ ಕೋಪದಿಂದ ದೈಹಿಕ ಶಿಕ್ಷಣ ಶಿಕ್ಷಕ, ತನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿನಿ ದೂರಿರುವ ವಿಡಿಯೊ ವೈರಲ್‌ ಆಗಿದೆ.

ಶಾಲೆಯ ಆವರಣದಲ್ಲಿ ವಿದ್ಯಾರ್ಥಿನಿಯರು ಅಳುತ್ತಿರುವುದು ವಿಡಿಯೊದಲ್ಲಿದ್ದು, ‘ಬೆಳಿಗ್ಗೆಯಿಂದ ಉಪಾಹಾರ ಸೇವಿಸದೇ ಕೆಲಸ ಮಾಡಿದರೂ ಶಿಕ್ಷಕರಿಗೆ ತೃಪ್ತಿಯಾಗಿಲ್ಲ. ಇನ್ನಷ್ಟು ಕೆಲಸ ಮಾಡಲು ಹೇಳಿದರು. ಈ ಸಂದರ್ಭದಲ್ಲಿ ಮನಬಂದಂತೆ ಥಳಿಸಿದ್ದಾರೆ’ ಎಂದು ವಿದ್ಯಾರ್ಥಿನಿ ಅದರಲ್ಲಿ ಹೇಳಿದ್ದಾಳೆ.

ADVERTISEMENT

ಈ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಕ ಮಲಕಪ್ಪ, ‘ಸಿಟ್ಟಿನ ಗಳಿಗೆಯಲ್ಲಿ ವಿದ್ಯಾರ್ಥಿನಿಗೆ ಹೊಡೆದಿದ್ದೇನೆ. ಇದಕ್ಕಾಗಿ ವಿದ್ಯಾರ್ಥಿನಿ ಹಾಗೂ ಪೋಷಕರ ಕ್ಷಮೆ ಕೇಳಿದ್ದೇನೆ’ ಎಂದರು.

‘ಮಾಹಿತಿ ತಿಳಿಯುತ್ತಿದ್ದಂತೆ ಮಲಕಪ್ಪ ಅವರಿಗೆ ಕ್ರೈಸ್‌ನ ಜಿಲ್ಲಾ ಸಂಯೋಜಕ ಶಿವರಾಮ ಚವ್ಹಾಣ ನೋಟಿಸ್ ಜಾರಿಗೊಳಿಸಿದ್ದಾರೆ. ಖುದ್ದು ವಿವರಣೆ ನೀಡಲು ಬುಧವಾರ (ಅ 6) ಹಾಜರಾಗುವಂತೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಎಂ.ವೈ. ಸುರಪುರ ಅವರಿಗೆ ಸೂಚಿಸಿದ್ದಾರೆ’ ಎಂದು ಕ್ರೈಸ್‌ನ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.