ಆಳಂದ: ಪ್ರಸ್ತುತ ದಿನಗಳಲ್ಲಿ ಶಿಕ್ಷಕರಲ್ಲಿ ಪಾಂಡಿತ್ಯ ಹಾಗೂ ಕೌಶಲಗಳ ಜತೆ ಸಮರ್ಪಣಾ ಭಾವದ ಗುಣ ಇದ್ದರೆ ಮಾತ್ರ ಶಾಲೆಗಳಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಶಿಕ್ಷಕರ ಸಂಘದ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದಿಂದ ಶಾಲೆ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಸೆ.6ರಿಂದ ಮತ್ತೆ ಶಾಲೆಗಳು ಆರಂಭಗೊಳ್ಳುತ್ತಿವೆ. ಕೋವಿಡ್ ಸುರಕ್ಷತೆ ನಿಯಮಗಳು ಪಾಲಿಸಿಕೊಂಡ ಕಲಿಕಾ ವಾತಾವರಣ ಉತ್ತಮ ಪಡೆಸಲು ತಿಳಿಸಿದರು.
ಪ್ರಸಕ್ತ ವರ್ಷ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಸೌಲಭ್ಯಗಳು ಒದಗಿಸಲು ವಿಳಂಬವಾಗಿದೆ. ಆದರೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಸಾಮಾಜಿಕ ಕಾಳಜಿಯಿಂದ ಮಕ್ಕಳು ಕಲಿಕೆಯಿಂದ ನಿರಾಸಕ್ತಿ ತಾಳದಂತೆ ಅಗತ್ಯ ಕಾಳಜಿ ವಹಿಸಲು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಸದಸ್ಯರಾದ ಸಂತೋಷ ಹೂಗಾರ, ಮೀರಾಜೋದ್ದಿನ್, ಬಿಆರ್ಸಿ ಗೌರಿಶಂಕರ ವರನಾಳೆ, ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಿಡಗೇರ, ಗುರುನಾಥ ಬಾವಿ, ಶ್ರೀಮಂತರಾವ ಜಿಡ್ಡೆ, ನರಸಪ್ಪ ಬಿರಾದಾರ, ರಾಣಪ್ಪ ಸಂಗನ್, ಲೋಕೇಶ ಜಾಧವ, ಪ್ರಕಾಶ ಕೋಟ್ರೆ ಇದ್ದರು. ನಿವೃತ್ತ ಶಿಕ್ಷಕರಾದ ವಿನೋಧಮಠ, ಚಂದ್ರಕಾಂತ ಪೂಲಾರೆ, ಧರ್ಮಣ್ಣಾ ಪೂಜಾರಿ ಮಾತನಾಡಿ ಸೇವಾ ಅನುಭವ ಹಂಚಿಕೊಂಡರು.
ಪ್ರಾಥಮಿಕ ಶಾಲೆ ವಿಭಾಗದ 26 ಶಿಕ್ಷಕರು ಹಾಗೂ ಪ್ರೌಢಶಾಲೆಯ ವಯೋ ನಿವೃತ್ತಿ ಹೊಂದಿದ ಐವರು ಶಿಕ್ಷಕರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.