ಕಲಬುರ್ಗಿ: ‘ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಯು ಎಲ್ಲ ಕಡೆಯಿಂದ ಹರಿದು ಬರುತ್ತಿದೆ. ಭವಿಷ್ಯದ ಕಲಿಕೆಗೆ ತಂತ್ರಜ್ಞಾನ ಸಹಕಾರಿಯಾಗಲಿದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ನಿಷ್ಠಿ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಭಾಗ ಹಾಗೂ ಎಂಜಿನಿಯರುಗಳ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒಬಿಇ (ಔಟಕಮ್ ಬೇಸ್ಡ್ ಎಜುಕೇಷನ್) ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಒಬಿಇ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಡಲಿದೆ. ಭೋಧನಾ ವೃತ್ತಿಯಲ್ಲಿ ಇರುವವರು ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ ಬೋಧನೆ ಮಾಡಬೇಕು. ಆಗ ಬೋಧನೆ ಪರಿಪೂರ್ಣವಾಗುತ್ತದೆ’ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ಬೋಧನಾ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಬೋಧಕರ ಪಾತ್ರ ಅಪಾರವಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಬೋಧಕರು ದೀರ್ಘಕಾಲಿಕ ಪರಿಣಾಮ ಬೀರುವಂತಹ ಶಕ್ತಿ ಹೊಂದಿದ್ದಾರೆ’ ಎಂದು ತಿಳಿಸಿದರು.
ಬೆಂಗಳೂರಿನ ಕೇಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಡಿ.ಎಚ್.ರಾವ್ ಮಾತನಾಡಿ, ‘ಒಬಿಇ ಪದ್ಧತಿಯು ವಿದ್ಯಾರ್ಥಿಗಳು ಏನು ಮಾಡಲು ಶಕ್ತರಾಗಿದ್ದಾರೆ ಎಂದು ತಿಳಿಯಲು ನೆರವಾಗುತ್ತದೆ. ಅಲ್ಲದೆ, ಅದಕ್ಕೆ ತಕ್ಕಂತೆ ಸಹ ಪಠ್ಯ ಚಟುವಟಿಕೆ, ಸಲಹೆ, ನಿಯೋಜಿತ ಕಾರ್ಯ ನೀಡಿ ವಿದ್ಯಾರ್ಥಿಗಳಲ್ಲಿ ಕೌಶಲ ಅಭಿವೃದ್ಧಿಪಡಿಸಲು ನೆರವಾಗಲಿದೆ’ ಎಂದು ಹೇಳಿದರು.
ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಎಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಎಸ್.ಮೋರೆ, ಕಾರ್ಯದರ್ಶಿ ಡಾ.ಬಾಬುರಾವ್ ಶೇರಿಕಾರ, ಡೀನ್ ಡಾ.ಲಿಂಗರಾಜ ಶಾಸ್ತ್ರಿ, ಮೌಲ್ಯಮಾಪನ ಕುಲಸಚಿವ ಡಾ.ಶಿವದತ್ತ ಹೊನ್ನಳ್ಳಿ, ಡಾ.ಲಕ್ಷ್ಮೀ ಮಾಕಾ, ಡಾ.ಬಸವರಾಜ ಮಠಪತಿ, ಡಾ.ಶಿವುಕುಮಾರ ಜವಳಗಿ ಇದ್ದರು.
ಪ್ರೊ.ರೇಖಾ ಸ್ವಾಗತಿಸಿದರು. ಪ್ರೊ.ಅಮೃತಾ ನಿರೂಪಿಸಿ, ಪ್ರೊ.ನಟರಾಜ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.