ಯಡ್ರಾಮಿ: ತಾಲ್ಲೂಕಿನ ತೆಲಗಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಶಾಲೆ ಮುಂದೆಯೇ ರಸ್ತೆ ಇದ್ದು ಆವರಣ ಗೋಡೆ ಇಲ್ಲದ್ದರಿಂದ ಮಕ್ಕಳು, ಶಿಕ್ಷಕರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.
1 ರಿಂದ 8ನೇ ತರಗತಿಯವರೆಗೆ 71 ಬಾಲಕರು, 70 ಬಾಲಕಿಯರು ಸೇರಿ ಒಟ್ಟು 141 ವಿದ್ಯಾರ್ಥಿಗಳು ಇದ್ದಾರೆ.4 ಜನ ಕಾಯಂ ಶಿಕ್ಷಕರಿದ್ದು ಮೂವರು ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಪ್ರಮುಖ ವಿಷಯಗಳಾದ ಇಂಗ್ಲಿಷ್, ಹಿಂದಿ, ವಿಜ್ಞಾನ ಬೋಧನೆಗೆ ಶಿಕ್ಷಕರೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳ ಕಲಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ.
ಶಾಲೆಯ ಒಂದು ಕೊಠಡಿ ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಮತ್ತು ಶಾಲೆ ಮುಂದೆಯೇ ರಸ್ತೆ ಇರುವುದರಿಂದ ಮಕ್ಕಳು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಅಪಘಾತ ಸಂಭವಿಸಿದ ಉದಾಹರಣೆಗಳೂ ಇವೆ. ಈ ಬಗ್ಗೆ ಎಸ್ಡಿಎಂಸಿ ಅಧ್ಯಕ್ಷರು ಗಮನ ಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರೊಬ್ಬರು.
ಈ ಸ್ಫರ್ಧಾತ್ಮಕ ಯುಗದಲ್ಲೂ ಶಾಲೆಯ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ದೂರವೇ ಉಳಿದಿದ್ದಾರೆ. ಸ್ಮಾರ್ಟ್ ಕ್ಲಾಸ್ ಸಹ ಇಲ್ಲದ್ದರಿಂದ ಆಧುನಿಕ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ಧಾರೆ.
ಶಾಲಾ ಆವರಣ, ಕೊಠಡಿಗಳ ಕಸ ಗುಡಿಸುವವರಿಲ್ಲ. ಪ್ರತಿದಿನ ವಿದ್ಯಾರ್ಥಿಗಳೇ ಸ್ವಚ್ಛ ಮಾಡುತ್ತಾರೆ. ನೀರಿನ ಟ್ಯಾಂಕ್ ನಿರ್ವಹಣೆ ಇಲ್ಲದೆ ಒಣಗಿದೆ. ಬಿಇಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಶಿಕ್ಷಕರು.
ಜಲ ನಿರ್ಮಲ ಯೋಜನೆಯಡಿ ಶಾಲೆಯಲ್ಲಿ ಶುದ್ಧ ನೀರಿನ ಘಟಕಸೌಲಭ್ಯ ಕಲ್ಪಿಸಿಲ್ಲ. ಮಕ್ಕಳಿಗೆ
ನೀರು ಬೇಕಾದರೆ ಶಾಲೆ ಆವರಣದಲ್ಲಿ ಇರುವ ಕೊಳವೆಬಾವಿಗೆ ಬಂದು ಕುಡಿಯಬೇಕು.
ಶಾಲೆಯಲ್ಲಿ ಮೂರು ಶೌಚಾಲಯಗಳಿದ್ದರೂ ಅವುಗಳಿಗೆ ಬೀಗ ಹಾಕಿರುವುದರಿಂದ ಇದ್ದೂ ಇಲ್ಲದಂತಾಗಿವೆ. ಶಾಲೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ರಾತ್ರಿ ವೇಳೆ ಶಾಲಾ ಆವರಣದಲ್ಲಿಯೇ ಕಿಡಿಗೇಡಿಗಳು ಮದ್ಯಪಾನ ಮಾಡುತ್ತಾರೆ. ಜನರಿಗೆ ಪ್ರವೇಶದ್ವಾರದಲ್ಲಿಯೇ ಮೊದಲು ಹಂದಿಗಳ ದರ್ಶನವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.