ADVERTISEMENT

ಕಾಳಗಿ: ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:22 IST
Last Updated 3 ಜನವರಿ 2026, 6:22 IST
ಕಾಳಗಿ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು
ಕಾಳಗಿ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು   

ಕಾಳಗಿ: ಇಲ್ಲಿನ ಐತಿಹಾಸಿಕ ದೇವಸ್ಥಾನ ನೀಲಕಂಠ ಕಾಳೇಶ್ವರ ಮಂದಿರದ ಬಾಗಿಲು ಕೀಲಿ ತೆರೆದು 20 ಗ್ರಾಂ ಬೆಳ್ಳಿಯನ್ನು ಶುಕ್ರವಾರ ಬೆಳಿಗ್ಗೆ ಕಳವು ಮಾಡಲಾಗಿದೆ.

ಬೆಳಗಿನ ಜಾವ 5.30ಕ್ಕೆ ದೇವಸ್ಥಾನಕ್ಕೆ ಬಂದ ಗುಡಿ ಪೂಜಾರಿ ನಾಗಯ್ಯ ಶಿವಲಿಂಗಯ್ಯಸ್ವಾಮಿ ಮಠಪತಿ, ಯಾರೋ ಕಳ್ಳರು ದೇವಸ್ಥಾನದ ಹಳೆ ಕಚೇರಿಯ ಬಾಗಿಲು ಕೀಲಿ ಮುರಿದಿರುವುದನ್ನು ಗಮನಿಸಿದ್ದಾರೆ.

ಹಳೆ ಕಚೇರಿ ಒಳಗಿದ್ದ ದೇವಸ್ಥಾನದ ಕೀಲಿ ತೆಗೆದುಕೊಂಡ ಕಳ್ಳರು ದೇವಸ್ಥಾನದ ಬಾಗಿಲು ತೆರೆದು ಏನೂ ಸಿಗದಿದ್ದಾಗ ವೀರಭದ್ರೇಶ್ವರ ಮೂರ್ತಿಗೆ (ಮೂಗಿನ ಮೇಲೆ) ಅಳವಡಿಸಿದ್ದ 20 ಗ್ರಾಂ ಬೆಳ್ಳಿ ಕಿತ್ತುಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ಪರಿಶೀಲಿಸಿದರು.

ಬೆರಳಚ್ಚು ವಿಭಾಗದ ಪಿಎಸ್ಐ ಪದ್ಮಾವತಿ, ಘಟನಾ ಸ್ಥಳ ಪರಿಶೀಲನಾ ಅಧಿಕಾರಿ ಬಸವರಾಜ, ಶ್ವಾನದಳದ ಗೋವಿಂದ ನೇತೃತ್ವದ ತಂಡ ಪ್ರಾಥಮಿಕ ತನಿಖೆ ಕೈಗೊಂಡರು.

ಸಿಸಿಟಿವಿ ಕ್ಯಾಮೆರಾ ಇಲ್ಲವೇ?: ದೇವಸ್ಥಾನಕ್ಕೆ ವಿವಿಧೆಡೆಯಿಂದ ನಿತ್ಯ ನೂರಾರು ಭಕ್ತರು ಬಂದು ಹೋಗುತ್ತಾರೆ. ಪೂಜೆ, ಹರಕೆ, ಕಾಣಿಕೆ ಸಲ್ಲಿಸಿ ಭಕ್ತಿಭಾವ ಮೆರೆಯುತ್ತಾರೆ. ಆದರೆ ಇಲ್ಲಿ ಸಿಸಿಟಿವಿ ಕ್ಯಾಮೆರಾ ಯಾಕಿಲ್ಲ? ಎಂಬ ಪ್ರಶ್ನೆ ಭಕ್ತರಲ್ಲಿ ಮನೆ ಮಾಡಿದೆ. ಕ್ಯಾಮೆರಾ ಅಳವಡಿಸದಿರುವುದನ್ನು ಬಂಡವಾಳ ಮಾಡಿಕೊಂಡ ಕಳ್ಳರು ಹಿಂದೆಯೂ ಅನೇಕ ಬಾರಿ ಸಣ್ಣಪುಟ್ಟ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಾಗಿಯೂ ದೇವಸ್ಥಾನ ಸಮಿತಿ ಅವರು ಈ ವಿಷಯ ಪೊಲೀಸರ ಗಮನಕ್ಕೆ ಯಾಕೆ ತಂದಿಲ್ಲ? ಎಂಬ ಚರ್ಚೆ ಶುರುವಾಗಿದೆ.

ಸಿಸಿಟಿವಿ ಕ್ಯಾಮೆರಾ ಹಾಕಲು ಸಿದ್ಧತೆ: ದೇವಸ್ಥಾನದ ಇಡೀ ಪರಿಸರದ ತುಂಬೆಲ್ಲ ಈಗ ಸಿಸಿಟಿವಿ ಕ್ಯಾಮೆರಾ ಹಾಕಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಕ್ಯಾಮೆರಾ ಅಳವಡಿಸುವವರನ್ನು ಕರೆದು ಸ್ಥಳ ಗುರುತಿಸಿ ಕೂಡಲೇ ಫಿಟಿಂಗ್ ಮಾಡಲು ತಿಳಿಸಲಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.