ಕಲಬುರಗಿ: ‘ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ಛಲಗಾರರು, ಮಹಾದೇವಪ್ಪ ರಾಂಪುರೆ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ಸೊಸೈಟಿ ಅಧ್ಯಕ್ಷ ಶಶೀಲ್ ನಮೋಶಿ ಅವರ ಪಾತ್ರ ಹೆಚ್ಚಿದೆ’ ಎಂದು ಎಚ್ಕೆಇ ಸಂಸ್ಥೆಯ ಬೆಳಗುಂಪಾದ ಗಂಗಾಧರಯ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಆಪರೇಷನ್ ಥಿಯೇಟರ್ ಹಾಗೂ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರ ಮತ್ತು ಆಸ್ಪತ್ರೆಯ ಸ್ವಚ್ಛತೆಗಾಗಿ ತರಿಸಲಾದ ಯಾಂತ್ರಿಕ ಉಪಕರಣಗಳ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್ಕೆಇ ಸೊಸೈಟಿ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ‘ಆಪರೇಷನ್ ಥಿಯೇಟರ್ನಿಂದ ಬಡ ರೋಗಿಗಳು ಕಡಿಮೆ ಬೆಲೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಬಸವೇಶ್ವರ ಆಸ್ಪತ್ರೆ ಸಂಸ್ಥಾಪಕರ ಆಶಯದಂತೆ ಇನ್ನೂ ಎತ್ತರಕ್ಕೆ ಬೆಳೆಯಬೇಕಿದೆ. ಅವರ ಆಶಯವನ್ನು ಸಾಕಾರ ಮಾಡಲು ಸಂಸ್ಥೆಯ ಎಲ್ಲ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಒಂದು ಕುಟುಂಬದಂತೆ ಭಾವಿಸಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪ್ರಮಾಣ ಮಾಡಿದ್ದೇವೆ. ಈ ಭಾಗದಲ್ಲಿಯೇ ದೊಡ್ಡ ಸಂಸ್ಥೆಯಾಗಿ ಬೆಳೆಸುವ ಗುರಿ ಹೊಂದಿದ್ದೇವೆ’ ಎಂದರು.
ಎಚ್ಕೆಇ ಸೊಸೈಟಿ ಉಪಾಧ್ಯಕ್ಷ ರಾಜಾ ಭಿ. ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲ, ಸದಸ್ಯರಾದ ಡಾ. ಶರಣಬಸಪ್ಪ ಹರವಾಳ, ಕಿರಣಕುಮಾರ್ ದೇಶಮುಖ, ನಾಗಣ್ಣ ಘಂಟಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರಣಗೌಡ ಪಾಟೀಲ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಶರಣಬಸಪ್ಪ ಅವಂಟಿ ಉಪಸ್ಥಿತರಿದ್ದರು. ಡಾ. ಅರುಂಧತಿ ಪಾಟೀಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.