ADVERTISEMENT

ಸೇಡಂ: ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿ ಶೌಚಾಲಯ

ಸಾರ್ವಜನಿಕರಿಂದ ತೀವ್ರ ವಿರೋಧ, ಸ್ಥಳಾಂತರಿಸಲು ಉಪ ವಿಭಾಗಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:08 IST
Last Updated 25 ಸೆಪ್ಟೆಂಬರ್ 2020, 1:08 IST
ಸೇಡಂನ ಬಸ್‌ ನಿಲ್ದಾಣ ಎದುರುಗಡೆ ಕಟ್ಟುತ್ತಿರುವ ಸಾರ್ವಜನಿಕ ಶೌಚಾಲಯ
ಸೇಡಂನ ಬಸ್‌ ನಿಲ್ದಾಣ ಎದುರುಗಡೆ ಕಟ್ಟುತ್ತಿರುವ ಸಾರ್ವಜನಿಕ ಶೌಚಾಲಯ   

ಸೇಡಂ: ಪಟ್ಟಣದ ಬಸ್‌ ನಿಲ್ದಾಣದ ಎದುರುಗಡೆ ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.

ಮುಖ್ಯ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಲಿದೆ. ಪಕ್ಕದಲ್ಲಿಯೇ ಕುಡಿಯುವ ನೀರಿನ ಶುದ್ಧೀಕರಣ ಘಟಕ ಇರುವುದರಿಂದ ಮುಂದಿನ ದಿನಗಳಲ್ಲಿ ಶೌಚಾಲಯದಿಂದವಾಸನೆ ಸಮಸ್ಯೆ ಎದುರಿಸಬೇಕಾಗುತ್ತದೆ. ಜತೆಗೆ ಕಟ್ಟಡ ನಿರ್ಮಾಣದಲ್ಲಿ ಸ್ವಲ್ಪ ಅಜಾಗ್ರತೆಯಾದರೂ ಶೌಚಾಲಯವು ಶುದ್ಧೀಕರಣ ಘಟಕದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನತೆ ಕಲುಷಿತ ನೀರನ್ನೇ ಕುಡಿಯುವ ದೌರ್ಭಾಗ್ಯ ಬರುವ ಸಾಧ್ಯತೆ ಇದೆ ಎನ್ನುವುದು ಸಾರ್ವಜನಿಕರ ಅಳಲು.

ಮುಖ್ಯರಸ್ತೆಯಲ್ಲಿ ಶೌಚಾಲಯವಿದ್ದಲ್ಲಿ ಮಹಿಳೆಯರು ಶೌಚಕ್ಕೆ ತೆರಳಲು ಮುಜುಗರ ಎದುರಿಸುವುದು ಖಂಡಿತ. ಅಲ್ಲದೆ ಕಟ್ಟಡ ನಿರ್ಮಿಸುತ್ತಿರುವ ಸ್ಥಳದ ಕಡೆ ಈಗಾಗಲೇ ಆಟೊಗಳು ನಿಲ್ಲುತ್ತವೆ. ಕಟ್ಟಡದಿಂದಾಗಿ ಆಟೊಗಳ ನಿಲುಗಡೆಗೆ ತೊಂದರೆ ಆಗಲಿದೆ. ಶೌಚಾಲಯ ನಿರ್ಮಾಣವಾದ ನಂತರ ಕಟ್ಟಡದ ಮುಂಭಾಗದಲ್ಲಿ ವಾಹನಗಳು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಲಿದೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಸರ್ಕಾರ ಅಲ್ಲೇ ಶೌಚಾಲಯ ನಿರ್ಮಾಣಕ್ಕೆ ಹೊರಟಿರುವುದು ಯಾವ ಉದ್ದೇಶಕ್ಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ADVERTISEMENT

ಸ್ಪಂದಿಸದ ಅಧಿಕಾರಿಗಳು: ‘ಬಸ್‌ ನಿಲ್ದಾಣದ ಎದುರುಗಡೆ ನಿರ್ಮಿಸುತ್ತಿರುವ ಶೌಚಾಲಯದ ಪಕ್ಕದಲ್ಲಿ ಕುಡಿವ ನೀರಿನ ಶುದ್ಧೀಕರಣ ಘಟಕ ಇದೆ. ಶೌಚಾಲಯ ನಿರ್ಮಾಣದಿಂದ ನೀರು ತೆಗೆದುಕೊಂಡು ಹೋಗಲು ಜನ ಹಿಂಜರಿಯುತ್ತಾರೆ. ಕೂಡಲೇ ಇದನ್ನು ಸ್ಥಳಾಂತರಿಸುವಂತೆ ಮಾರ್ಚ್ ತಿಂಗಳಲ್ಲಿ ಪುರಸಭೆ ಸದಸ್ಯ ನಾಗಕುಮಾರ ಎಳ್ಳಿ ಅವರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿರುತ್ತಾರೆ. ಇದರ ಜೊತೆಗೆ ಅನೇಕರು ಮನವಿ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ಸ್ಪಂದಿಸಿದೆ ತಮ್ಮ ಕಾರ್ಯ ಮುಂದುವರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗ್ತಿದೆ.

ಸ್ಥಳಾಂತರಕ್ಕೆ ಆಗ್ರಹ: ಶೌಚಾಲಯ ಕಟ್ಟಡ ನಿರ್ಮಾಣವನ್ನು ಕೂಡಲೇ ತಡೆ ಹಿಡಿಯಬೇಕು ಜೊತೆಗೆ ಇದನ್ನು ಸ್ಥಳಾಂತರಿಸಬೇಕು ಎಂದು ಪುರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರು ಉಪ ವಿಭಾಗಾಧಿಕಾರಿ ರಮೇಶ ಕೋಲಾರ ಅವರನ್ನು ಆಗ್ರಹಿಸಿದರು.

ಮುಖಂಡರಾದ ಅಬ್ದುಲ್ ಗಫರ್, ನಾಗಕುಮಾರ ಎಳ್ಳಿ, ವೀರೇಂದ್ರ ರುದ್ನೂರ, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ಸಿದ್ದು ನಾಯಿಕೋಡಿ, ಗೋಪಾಲ ರಾಠೋಡ, ರವೀಂದ್ರ ಜಡೇಕರ್, ಹಾಜಿನಾಡೆಪಲ್ಲಿ, ಅಶೋಕ ದಂಡೋತಿ, ದೇವಿಂದ್ರ ಎಳ್ಳಿ, ಕಾಶಿನಾಥ ನಾಟೀಕಾರ, ಅಂಕಿತ ಜೋಶಿ, ದತ್ತಾತ್ರೆಯ ಪಾಟೀಲ, ಮಹೇಶ ಯಳಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.