ಕಮಲಾಪುರ (ಕಲಬುರ್ಗಿ ಜಿಲ್ಲೆ): ಕಮಲಾಪುರ ತಾಲ್ಲೂಕಿನ ಕಟ್ಟೋಳಿ ಕ್ರಾಸ್ ಬಳಿ ಶನಿವಾರ ರಾತ್ರಿ ಲಾರಿಯೊಂದು ಎತ್ತಿನಗಾಡಿಗೆ ಡಿಕ್ಕಿ ಹೊಡೆದು, ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಅಣಕಲ್ಕಿಂಡಿ ತಾಂಡಾ ನಿವಾಸಿಗಳಾದ ಸವಿತಾಬಾಯಿ ರಮೇಶ್ ಚವ್ಹಾಣ (40), ದಶರಥ ಸುಭಾಷ ಚವ್ಹಾಣ (32) ಹಾಗೂ ಜಗದೇವಿ ರಾಮು ರಾಠೋಡ (32) ಮೃತಪಟ್ಟವರು.
ಈ ಮೂವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ನಾಗೂರ ತಾಂಡಾದ ಮನೆಯೊಂದಕ್ಕೆ ಸೆಂಟ್ರಿಂಗ್ ಕೆಲಸಕ್ಕಾಗಿ ಯಂತ್ರೋಪಕರಣ ಸಮೇತ ಲಾರಿಯಲ್ಲಿ ತೆರಳಿದ್ದರು. ಕೆಲಸ ಮುಗಿಸಿ ಮರಳುವಾಗ ಎದುರಿನಿಂದ ಬರುತ್ತಿದ್ದ ಎತ್ತಿನ ಗಾಡಿಗೆ ಲಾರಿ ಡಿಕ್ಕಿ ಹೊಡೆಯಿತು. ಅಪಘಾತ ತಪ್ಪಿಸಲು ಚಾಲಕ ಲಾರಿಯನ್ನು ರಸ್ತೆ ಬದಿಗೆ ಇಳಿಸಿದ್ದರಿಂದ ಅದು ಉರುಳಿಬಿತ್ತು. ಲಾರಿಯಲ್ಲಿದ್ದ ಸೆಂಟ್ರಿಂಗ್ ಸಾಮಗ್ರಿಗಳು ಹಾಗೂ ಜಲ್ಲಿಕಲ್ಲು ಕಲಿಸುವ ಭಾರವಾದ ಯಂತ್ರಗಳು ಕಾರ್ಮಿಕರ ಮೇಲೆಯೇ ಬಿದ್ದವು. ಪರಿಣಾಮ ಕಾರ್ಮಿಕರು ತಾಸುಗಟ್ಟಲೇ ನರಳಾಡಿ ಮೃತಪಟ್ಟರು.
ರಾತ್ರಿಯಾದ್ದರಿಂದ ಈ ಮಾರ್ಗದಲ್ಲಿ ಹೆಚ್ಚಿನ ವಾಹನ ಸಂಚಾರ ಇರಲಿಲ್ಲ. ಇದರಿಂದ ಬೇಗ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.