ಕಲಬುರಗಿ: 2023–24ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ ಕೃಷಿ ಆಧಾರಿತ ಉಪ ಕಸಬುಗಳು ಹಾಗೂ ಸಾವಯವ ಕೃಷಿ ಕುರಿತು ರೈತರಿಗೆ ಮೂರು ದಿನಗಳ ತರಬೇತಿಯನ್ನು ಕಲಬುರಗಿ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೋಡ, ‘ರೈತರು ಸಾವಯವ ಕೃಷಿ, ಪಾರಂಪರಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಲಬುರಗಿ ಮಹಾಗಾಂವ್ ಕ್ರಾಸ್ ಹೈನುಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಲ್ಲಿನಾಥ ಹೆಮಾಡಿ ಮಾತನಾಡಿ, ದೇಶಿ ಗೋವಿನ ಮಹತ್ವ, ಅದರಿಂದ ತಯಾರಾಗುವ ಉತ್ಪನ್ನಗಳ ಉಪಯೋಗಗಳನ್ನು ತಿಳಿಸಿದರು.
ಎನ್ಆರ್ಎಲ್ಎಂ ಸಂಯೋಜಕ ಅಬ್ದುಲ್ ರಹೀಮ್ ಮಾತನಾಡಿ, ‘ರೈತರು ಒಗ್ಗಟ್ಟಾಗಿ ಸಾವಯವ ಕೃಷಿಯಲ್ಲಿ ತೊಡಗಬೇಕು. ಅತಿಯಾದ ರಾಸಾಯನಿಕಗಳ ಉಪಯೋಗದಿಂದ ನೆಲ–ಜಲ ಸಂಪತ್ತು ಕಲುಷಿತವಾಗುತ್ತಿದೆ. ಅದಕ್ಕೆ ಸಾವಯವ ಕೃಷಿಯೊಂದೇ ಸೂಕ್ತ ಪರಿಹಾರ’ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ಸಾಯಿ ಸಮರ್ಥ ಗೃಹ ಉದ್ಯಮಿ ಅನ್ನಪೂರ್ಣ ಸಂಗೋಳಗಿ, ನಿವೃತ್ತ ಕೃಷಿ ಅಧಿಕಾರಿ ಲಕ್ಷ್ಮಣ ಕಡಬೂರ ಹಾಗೂ ಅಶೋಕಕುಮಾರ ಬೆಣ್ಣೂರ್ ಮಾತನಾಡಿದರು.
ಮಣ್ಣು ಪರೀಕ್ಷಾ ಕೇಂದ್ರ, ಕರ್ನಾಟಕ ಬೀಜ ಸಂಸ್ಕರಣಾ ಘಟಕ, ಕೃಷಿ ವಿಜ್ಞಾನ ಕೇಂದ್ರದ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕೇಂದ್ರ, ಕಲಬುರಗಿ-ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಸಹಕಾರಿ ಹಾಲು ಒಕ್ಕೂಟದ ಎಲ್ಲ 32 ರೈತರನ್ನು ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೋಡ ಹಾಗೂ ಕೃಷಿ ಅಧಿಕಾರಿ ಯಾಸ್ಮಿನ್ ಅವರ ನೇತೃತ್ವದಲ್ಲಿ ಕ್ಷೇತ್ರ ಭೇಟಿ ಮಾಡಿಸಲಾಯಿತು.
ನಂತರ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ರೈತ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.