ಕಲಬುರಗಿ: ‘ಮಧ್ಯರಾತ್ರಿ 3.30ಕ್ಕೆ ಪಾಲಿಕೆಯ ಅಧಿಕಾರಿಗಳ ಐ.ಡಿ.ಯಲ್ಲಿ ಲಾಗ್ಇನ್ ಆಗಿ 87 ಆಸ್ತಿಗಳ ಖಾತೆಯ ಹಕ್ಕುಗಳು ವರ್ಗಾವಣೆ ಆಗುತ್ತವೆ. ಮತ್ತೊಂದು ಕಡೆ ಪಾಲಿಕೆಯ ನಗರದ ಗಡಿಗೂ ಹೊಂದಿಕೊಳ್ಳದ 7,500 ಮನೆಗಳು ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆಯಾಗುತ್ತವೆ. ಇದೆಲ್ಲಾ ಹೇಗೆ ಸಾಧ್ಯ, ಹೊಣೆ ಯಾರು? ಇದರ ಹಿಂದಿರುವ ಶಕ್ತಿಮಾನ್ ಯಾರು?’ ಎಂದು ಆಡಳಿತಾರೂಢ ಕಾಂಗ್ರೆಸ್ ಸದಸ್ಯರೂ ಆದ ಮಾಜಿ ಮೇಯರ್ ಸೈಯದ್ ಅಹ್ಮದ್ ಆಕ್ರೋಶ ಹೊರಹಾಕಿದರು.
ಇಲ್ಲಿನ ಟೌನ್ಹಾಲ್ನಲ್ಲಿ ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಆಗುತ್ತಿದ್ದಂತೆ ಮೌನ ಆವರಿಸಿತ್ತು. ‘ಅಧಿಕಾರಿಗಳನ್ನು ಅಮಾನತು ಮಾಡಿ, ತರಾಟೆ ತೆಗೆದುಕೊಳ್ಳುವುದು ಪರಿಹಾರವಲ್ಲ. ಈ ಕುರಿತ ತನಿಖೆಗಾಗಿ ಉನ್ನತ ಮಟ್ಟದ ಸಿಬಿಐ ಅಥವಾ ಸಿಐಡಿಯಂತಹ ಏಜೆನ್ಸಿಗೆ ಏಕೆ ಕೊಡಬಾರದು’ ಎಂದು ಕೇಳಿದರು.
87 ಆಸ್ತಿಗಳ ವರ್ಗಾವಣೆಯನ್ನು ವಲಯ ಅಧಿಕಾರಿಗಳು ಸಹ ಒಪ್ಪಿಕೊಂಡು, ‘ಲಾಗ್ಇನ್ ಹೇಗೆ ಆಗಿದೆ ಗೊತ್ತಿಲ್ಲ. ಆರ್ಐ, ಆರ್ಒಗಳ ಸೂಚನೆಯೂ ಇಲ್ಲ. 87 ಆಸ್ತಿಗಳನ್ನು ಅನುರ್ಜಿತಗೊಳಿಸಲಾಗಿದೆ’ ಎಂದರು. ‘ಅಧಿಕಾರಿಗಳ ಮೊಬೈಲ್ ನಂಬರ್ ಒಟಿಪಿ, ಅನುಮತಿ ಇಲ್ಲದೆ ಲಾಗ್ಇನ್ ಹೇಗೆ ಸಾಧ್ಯ’ ಎಂದು ವಿಪಕ್ಷದ ಸದಸ್ಯರು ಪ್ರಶ್ನಿಸಿದರು.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಪ್ರತಿಕ್ರಿಯಿಸಿ, ‘ಎಲ್ಲಿಂದ ಲಾಗ್ಇನ್ ಆಗಿದೆ ಎಂಬುದನ್ನು ಕೇಳಿದ್ದೇವೆ. ಪಾಲಿಕೆಯ ಸಾಫ್ಟ್ವೇರ್ಗಳ ಲಾಗ್ಇನ್ಗಳಿಗೆ ಬಳಸುತ್ತಿದ್ದ ಮೊಬೈಲ್ ನಂಬರ್ಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ. 87 ಆಸ್ತಿಗಳನ್ನು ವರ್ಗಾಯಿಸಿದವರೇ ಅದಕ್ಕೆ ಹೊಣೆಗಾರರು ಆಗುತ್ತಾರೆ. ವಿಚಾರಣೆಯ ಹಂತದಲ್ಲಿದೆ’ ಎಂದರು.
‘7,500 ಮನೆಗಳಿಗೆ ಪಿಎಲ್ಡಿ ನಂಬರ್, ಖಾತೆ ಸ್ವೀಕೃತವಾಗಿದ್ದು ಹೇಗೆ? ಯಾರು ಮಾಡಿದ್ದು? ಯಾವೆಲ್ಲ ದಾಖಲೆಗಳನ್ನು ಕೊಟ್ಟಿದ್ದಾರೆ? ಪಾಲಿಕೆಯಲ್ಲಿ ಏನು ನಡೆಯುತ್ತಿದೆ? ಅಕ್ರಮವಾಗಿ ಸೇರಿದವರು ಪಾಲಿಕೆ ಸದಸ್ಯರು, ಅಧಿಕಾರಿಗಳಿಗೆ ಸೌಲಭ್ಯಗಳನ್ನು ಕೊಡುವಂತೆ ಕಿರುಕುಳ ಕೊಡುತ್ತಿದ್ದಾರೆ’ ಎಂದು ಸೈಯದ್ ಅಹ್ಮದ್ ಬೇಸರ ವ್ಯಕ್ತಪಡಿಸಿದರು.
‘ಪಾಲಿಕೆಯ ಎಲ್ಲ ಆಸ್ತಿಗಳನ್ನು ಇ –ಆಸ್ತಿ ತಂತ್ರಾಂಶದಲ್ಲಿ ಡಿಜಿಟಲೀಕರಣ ಮಾಡುವಂತೆ ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆಯೇ ಸುತ್ತೋಲೆ ಹೊರಡಿಸಿತ್ತು. 1.17 ಲಕ್ಷ ಆಸ್ತಿಗಳಲ್ಲಿ ಇದುವರೆಗೆ ಕೇವಲ 21 ಸಾವಿರ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಕಮಿಷನರ್, ವಲಯ ಆಯುಕ್ತರು, ಎಂಜಿನಿಯರ್ಗಳು ಏನು ಮಾಡುತ್ತಿದ್ದಾರೆ? ಮನೆಯಲ್ಲಿ ಚಿಕನ್ ಬಿರಿಯಾನಿ ತಿನ್ನುತ್ತಿದ್ದಾರಾ? ಹೀಗಾದರೆ, ಪಾಲಿಕೆಗೆ ಬಜೆಟ್ ಎಲ್ಲಿಂದ ಬರುತ್ತದೆ? ಅಭಿವೃದ್ಧಿ ಹೇಗೆ ಮಾಡುತ್ತಾರೆ’ ಎಂದು ಕೇಳಿದರು.
ಮೇಯರ್ ಯಲ್ಲಪ್ಪ ನಾಯಕೊಡಿ ಮಾತನಾಡಿ, ‘ಒಂದು ತಿಂಗಳ ಹಿಂದೆಯೇ ಸಭೆ ನಡೆಸಿ ಪ್ರತಿಯೊಬ್ಬ ಬಿಲ್ ಕಲೆಕ್ಟರ್ ನಿತ್ಯ 30 ಮನೆಗಳಿಗೆ ಭೇಟಿ ಕೊಟ್ಟು ಡಿಜಿಟಲೀಕರಣ ಮಾಡುವಂತೆ ಸೂಚಿಸಿದ್ದೇವೆ. ಎಷ್ಟು ಮನೆಗಳಿಗೆ ಹೋಗಿದ್ದಿರಾ? ಈ ರೀತಿ ವರ್ತಿಸಿದರೆ ಸಭೆ ನಡೆಸುವುದರ ಉದ್ದೇಶವಾದರೂ ಏನು’ ಎಂದು ಕಿಡಿಕಾರಿದರು.
‘ಬಿಲ್ ಕಲೆಕ್ಟರ್ಗಳ ಕೊರತೆಯನ್ನು ಸರಿದೂಗಿಸಲು 22 ಮಂದಿ ಬಿಲ್ ಕಲೆಕ್ಟರ್ಗಳನ್ನು 45ಕ್ಕೆ ಏರಿಕೆ ಮಾಡಿದ್ದೇವೆ. ಸರ್ವರ್ ಸಮಸ್ಯೆಯಿಂದಾಗಿ ಗುರಿ ಮುಟ್ಟಲು ಆಗಲಿಲ್ಲ. ಇ–ಆಸ್ತಿಯ ಗುರಿಯನ್ನು ಮುಟ್ಟಲೇಬೇಕು’ ಎಂದು ಆಯುಕ್ತರು ಹೇಳಿದರು.
ಈ ಬಗ್ಗೆ ವಿಶೇಷ ಸಭೆಯಲ್ಲಿ ವಿವರವಾಗಿ ಚರ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಸಚಿನ್ ಶಿರವಾಳ, ಮೊಹಮ್ಮದ್ ಅಜೀಮುದ್ದೀನ್, ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಶರಣಬಸವೇಶ್ವರ ಸಂಸ್ಥಾನಕ್ಕೆ ಜಾತ್ರಾ ಮೈದಾನ ನೀಡಲು ಚರ್ಚೆ
ಸಭೆಯಲ್ಲಿ ಕಾನೂನು ವಿಷಯಗಳ ಪ್ರಸ್ತಾಪದ ವೇಳೆ ಪಾಲಿಕೆ ಹಾಗೂ ಶರಣಬಸವೇಶ್ವರ ಸಂಸ್ಥಾನದ ನಡುವೆ ಜಾತ್ರಾ ಮೈದಾನ ಸಂಬಂಧ ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯವನ್ನು ಹಿಂಪಡೆದು ಮೈದಾನವನ್ನು ಜಾತ್ರೆಗಾಗಿ ಸಂಸ್ಥಾನಕ್ಕೆ ಒಪ್ಪಿಸುವ ಕುರಿತು ಚರ್ಚೆಯಾಯಿತು. ಪ್ರತಿಪಕ್ಷದ ನಾಯಕ ಸಚಿನ್ ಶಿರವಾಳ ಮಾತನಾಡಿ ‘ಶರಣಬಸವೇಶ್ವರರು ಈ ಭಾಗದ ಆರಾಧ್ಯ ದೇವರು. ಪಾಲಿಕೆಯು ನ್ಯಾಯಾಲಯದಲ್ಲಿ ಒಂದು ಬಾರಿ ಹಿನ್ನೆಡೆ ಅನುಭವಿಸಿದೆ. ಜಾತ್ರೆಯ ಅನುಕೂಲಕ್ಕಾಗಿ ಸಂಸ್ಥಾನಕ್ಕೆ ನೀಡುವ ನಿರ್ಣಯ ತೆಗೆದುಕೊಳ್ಳಬೇಕು’ ಎಂದರು. ಇದಕ್ಕೆ ಮಾಜಿ ಮೇಯರ್ ವಿಶಾಲ ದರ್ಗಿ ಸಹ ಧ್ವನಿಗೂಡಿಸಿದರು. ‘ಖಾಜಾ ಬಂದಾನವಾಜ್ (ಕೆಬಿಎನ್) ದರ್ಗಾದ ತೆರಿಗೆಯನ್ನು ಮನ್ನಾ ಮಾಡಬೇಕು’ ಎಂದು ಆಡಳಿತ ಪಕ್ಷದ ನಾಯಕ ಶೇಖ್ ಅಜ್ಮಲ್ ಅಹ್ಮದ್ ಅಫ್ಜಲ್ ಗೋಲಾ ಹೇಳಿದರು. ‘ಸಭೆಯಲ್ಲಿ ಧರ್ಮಗಳ ಕುರಿತು ಚರ್ಚಿಸುವುದು ಸರಿಯಲ್ಲ. ಮುಂದಿನ ಬಾರಿ ಈ ಬಗ್ಗೆ ಮತ್ತೆ ನಿರ್ಣಯ ಮಾಡೋಣ’ ಎಂದು ಮೇಯರ್ ಚರ್ಚೆಗೆ ತೆರೆ ಎಳೆದರು.
ನಾಯಿಗಳನ್ನು ನಿಯಂತ್ರಿಸುವಂತೆ ಸದಸ್ಯೆ ಕಣ್ಣೀರು ಆಕ್ರೋಶ
ಸ್ಥಾಯಿ ಸಮಿತಿ ಸದಸ್ಸೆ ಇರ್ಫಾನಾ ಪರ್ವೀನ್ ಅವರು ನಾಯಿ ಕಡಿತದಿಂದ ಗಾಯಗೊಂಡ ಬಾಲಕ ಹಾಗೂ ಪೋಷಕರನ್ನು ಮೇಯರ್ ಮುಂದೆ ಕರೆತಂದರು. ಮಹಿಳಾ ಸದಸ್ಯರೂ ಅವರ ಜೊತೆಗೆ ಬಂದರು. ‘ಎರಡು ವರ್ಷಗಳಿಂದ ನಾಯಿಗಳ ಕಾಟ ಹೆಚ್ಚಾಗಿ ನಗರವಾಸಿಗಳು ಭಯಬೀತರಾಗಿದ್ದಾರೆ. ಇದಕ್ಕೆ ಏನಾದರು ಪರಿಹಾರ ಕೊಡಲೇಬೇಕು’ ಎಂದು ಕಣ್ಣೀರು ಹಾಕುತ್ತಾ ಆಕ್ರೋಶ ಹೊರಹಾಕಿದರು. ಇತರೆ ಸದಸ್ಯರೂ ತಮ್ಮ ವಾರ್ಡ್ಗಳಲ್ಲಿನ ಶ್ವಾನಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿದರು.
ಬಾಲಕನನ್ನು ಚಿಕಿತ್ಸೆಗೆ ಕಳುಹಿಸಿ ಆಸನದಲ್ಲಿ ಬಂದು ಕೂರುವಂತೆ ಮೇಯರ್ ಸೂಚಿಸಿದರು. ಕೋಪದಿಂದ ಮೈಕ್ ಬಿಸಾಡಿ ತಮ್ಮ ಸ್ಥಾನಕ್ಕೆ ತೆರಳಿದರು. ಬಾಲಕನಿಗೆ ಚಿಕಿತ್ಸೆ ಕೊಡಿಸುವುದಾಗಿ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ ಊಟದ ಅವಧಿವರೆಗೂ ಗಾಯಗೊಂಡ ಮಗುವಿನೊಂದಿಗೆ ಪೋಷಕರು ಟೌನ್ ಹಾಲ್ ಹೊರಗೆ ಕಾಯುತ್ತಾ ಕುಳಿತ್ತಿದ್ದರು. ಶ್ವಾನಗಳ ಸಂಖ್ಯೆ ತಗ್ಗಿಸಲು ಪರಿಹಾರವಿಲ್ಲ: ‘ನಗರದಲ್ಲಿ ಸುಮಾರು 16 ಸಾವಿರ ನಾಯಿಗಳಿವೆ. ಅವುಗಳ ಸಂಖ್ಯೆ ತಗ್ಗಿಸಲು ಎಬಿಸಿ ಒಂದೇ ಪರಿಹಾರ. ಪ್ರಸ್ತುತ 2500 ನಾಯಿಗಳಿಗೆ ಮಾತ್ರವೇ ಎಬಿಸಿ ಮಾಡಬಹುದು. ಶ್ವಾನಗಳ ಶೆಡ್ ವ್ಯವಸ್ಥೆ ಮಾಡಿದ್ದರೂ ಸುಮಾರು 400 ನಾಯಿ ಇರಿಸಬಹುದು. ಇರುವ ನಾಯಿಗಳನ್ನು ಕಡಿಮೆ ಮಾಡಲು ಪರಿಹಾರ ಇಲ್ಲ. ಎಬಿಸಿ ಸಂಖ್ಯೆಯನ್ನು 5000ಕ್ಕೆ ಹೆಚ್ಚಿಸುತ್ತೇವೆ’ ಎಂದು ಆಯುಕ್ತರು ಹೇಳಿದರು.
ಪೂರ್ವ ಸಿದ್ಧತೆ ಕೊರತೆ: ಮೊಬೈಲ್ ಮೊರೆ ಹೋದ ಅಧಿಕಾರಿಗಳು ಸಭಾ ನಡಾವಳಿಗಳನ್ನು ಮುಂಚಿತವಾಗಿ ತಿಳಿಸಿದ್ದರೂ ಬಹುತೇಕ ಅಧಿಕಾರಿಗಳು ಪೂರ್ವ ಸಿದ್ಧತೆ ಇಲ್ಲದೆ ಬಂದಿದ್ದರು. ಸದಸ್ಯರು ಸುತ್ತೋಲೆಗಳ ವಿವರ ಅಂಕಿಅಂಶಗಳು ಗುರಿ ಸಾಧನೆ ಬಾಕಿ ಉಳಿದ ಪರ್ಸೆಂಟೇಜ್ ಅನುದಾನದ ಬಗ್ಗೆ ಕೇಳಿದಾಗಲೆಲ್ಲ ಮಾಹಿತಿಗಾಗಿ ತಮ್ಮ ಮೊಬೈಲ್ಗಳಲ್ಲಿ ಹುಡುಕಾಡುತ್ತಿದ್ದರು. ಉತ್ತರ ಗೊತ್ತಿಲ್ಲದೆ ಶಾಲಾ ಮಕ್ಕಳಂತೆ ನಿಲ್ಲುತ್ತಿದ್ದ ಅಧಿಕಾರಿಗಳಿಗೆ ಸದಸ್ಯರು ಮತ್ತು ಮೇಯರ್ ತರಾಟೆಗೆ ತೆಗೆದುಕೊಂಡರು. ‘ಸರ್ಕಾರಿ ಕೆಲಸಕ್ಕಾಗಿ ಹಗಲು ರಾತ್ರಿ ಓದಿ ಇಲ್ಲಿಗೆ ಬಂದಿದ್ದಿರಾ. ತೆಗೆದುಕೊಳ್ಳುವ ಸಂಬಳಕ್ಕಾದರೂ ಮಾಹಿತಿಯನ್ನು ಸಿದ್ಧಪಡಿಸಿಕೊಂಡು ಸಭೆಗೆ ಬರಬೇಕಲ್ಲವಾ’ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.