ADVERTISEMENT

ಸುಟ್ಟುಹೋದ ವಿದ್ಯುತ್ ಪರಿವರ್ತಕ, ತಪ್ಪಿದ ಅನಾಹುತ

ಚಂದಾಪುರ ವಿದ್ಯುತ್ ಉಪಕೇಂದ್ರದಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 4:02 IST
Last Updated 17 ಮಾರ್ಚ್ 2021, 4:02 IST
ಚಿಂಚೋಳಿಯ ಚಂದಾಪುರದಲ್ಲಿರುವ 110 ಕಿಲೊವಾಟ್ ವಿದ್ಯುತ್ ಉಪ ಕೇಂದ್ರದಲ್ಲಿ ಅಗ್ನಿಅವಘಡ ಸಂಭವಿಸಿ 20 ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸುಟ್ಟು ಕರಕಲಾಗಿದೆ
ಚಿಂಚೋಳಿಯ ಚಂದಾಪುರದಲ್ಲಿರುವ 110 ಕಿಲೊವಾಟ್ ವಿದ್ಯುತ್ ಉಪ ಕೇಂದ್ರದಲ್ಲಿ ಅಗ್ನಿಅವಘಡ ಸಂಭವಿಸಿ 20 ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸುಟ್ಟು ಕರಕಲಾಗಿದೆ   

ಚಂದಾಪುರ (ಚಿಂಚೋಳಿ): ಇಲ್ಲಿನ ಚಂದಾಪುರದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 110 ಕಿಲೋವಾಟ್ ವಿದ್ಯುತ್ ಉಪಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದರಿಂದ 20 ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸುಟ್ಟು ಕರಕಲಾಗಿದೆ.

ಮಿನಿ ವಿಧಾನ ಸೌಧದ ಎದುರುಗಡೆ ಇರುವ ಉಪಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದಿಂದ ಏಕಾಏಕಿ ದಟ್ಟಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿಯೇ ಪರಿವರ್ತಕ ಸುಟ್ಟುಹೋಯಿತು. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರು ಆತಂಕದ ವಾತಾವರಣ ನಿರ್ಮಾಣವಾಯಿತು. ಆದರೆ, ಯಾವುದೇ ಪ್ರಾಣ ಹಾನಿ ಆಗಲಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ನೀರು ಹರಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು. ಸೇಡಂನಿಂದ ಘಟನಾ ಸ್ಥಳಕ್ಕೆ ಧಾವಿಸಿ ಬಂದಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಮುಮ್ತಾಜ್ ಬೇಗಂ ಘಟನೆಯ ಮಾಹಿತಿ ಪಡೆದರು. ಜತೆಗೆ ಜನರಿಗೆ ಅನಾನುಕೂಲವಾಗದಂತೆ ವಿದ್ಯುತ್ ಪ್ರಸಾರಕ್ಕೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿಯೇ ಮೊಕ್ಕಾಂ
ಹೂಡಿದ್ದಾರೆ.

ADVERTISEMENT

ಡಿ.ಸಿ ವಿಫಲವಾಗಿದ್ದರಿಂದ ರಕ್ಷಣಾ ಡಿವೈಸ್‌ಗಳು ಬಂದ್ ಆಗಿವೆ. ಇದರಿಂದ ವಿದ್ಯುತ್ ಜಾಲದ ಒತ್ತಡ ಅಧಿಕವಾಗಿದೆ. ಸಿಬ್ಬಂದಿಯ ಅಜಾಗರೂಕತೆಯೂ ಅವಘಡಕ್ಕೆ ಕಾರಣವಾಗಿದ್ದು, ನಿಗಮಕ್ಕೆ ಅಂದಾಜು ₹ 80 ಲಕ್ಷ ನಷ್ಟ ಉಂಟಾಗಿದೆ ಎಂದು ಮುಮ್ತಾಜ್ ಬೇಗಂ ‘ಪ್ರಜಾವಾಣಿ’ಗೆ ತಿಳಿಸಿದರು.

20 ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹೊಸದಾಗಿ ಹೈದರಾಬಾದ್‌ನಿಂದ ತರಿಸಲಾಗುತ್ತಿದೆ. ಈಗಾಗಲೇ ವಾಹನದಲ್ಲಿ ಲೋಡ್ ಆಗಿದೆ. ಅದನ್ನು ಚಿಂಚೋಳಿಯ ಚಂದಾಪುರಕ್ಕೆ ತಂದು ಇಲ್ಲಿ ಕೂಡಿಸಿ ಅದಕ್ಕೆ ಚಾರ್ಜ್ ಮಾಡಬೇಕಾಗುತ್ತದೆ. ಇದಕ್ಕಾಗಿ 3– 4 ದಿನ ಸಮಯ ತಗುಲುವ ಸಾಧ್ಯತೆಯಿದೆ. ಹೀಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್‌ ಮಾಡಿ ಎಲ್ಲರಿಗೂ ವಿದ್ಯುತ್ ಪೂರೈಸಲು ಪ್ರಯತ್ನ ನಡೆಸುತ್ತಿರುವುದಾಗಿ ಮುಮ್ತಾಜ್ ಮೇಗಂ ಹೇಳಿದರು.

ಪ್ರಯುಕ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಜೆಸ್ಕಾಂ ಗ್ರಾಹಕರು ಸಹಕರಿಸಲು ಅವರು ಮನವಿ ಮಾಡಿದ್ದಾರೆ.

ಇದರಿಂದಾಗಿ ಸುಲೇಪೇಟ, ನಿಡಗುಂದಾ, ಕುಂಚಾವರಂ, ಮಿರಿಯಾಣ, ಚಿಮ್ಮನಚೋಡ ಮತ್ತು ಐನಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕತ್ತಲು ಆವರಿಸಿದೆ.

ಸಿಬ್ಬಂದಿಯ ಅಜಾರೂಕತೆ ಅಥವಾ ವಿದ್ಯುತ್ ತಂತಿ ಕಡಿದು ಬಿದ್ದು ಅವಘಡ ಸಂಭವಿಸಿದೆಯೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು

-ಮುಮ್ತಾಜ್ ಬೇಗಂ, ಕಾರ್ಯಪಾಲಕ ಎಂಜಿನಿಯರ್, ಜೆಸ್ಕಾಂ, ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.