ಸೇಡಂ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ಕುರಿಗಾಹಿಗಳಿಬ್ಬರು ಅರೆಬೊಮ್ಮನಳ್ಳಿ ಗ್ರಾಮದ ಕಾಗಿಣಾ ನದಿ ಪಾತ್ರದಲ್ಲಿ ಬುಧವಾರ ಮಧ್ಯಾಹ್ನ ಈಜಾಡುತ್ತಿದ್ದಾಗ ಆಳವಾದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬೀರನಹಳ್ಳಿ ಗ್ರಾಮದ ಯಲ್ಲಪ್ಪ (26) ಹಾಗೂ ಈತನ ಸಂಬಂಧಿ ನರೇಶ (16) ಮೃತಪಟ್ಟಿದ್ದಾರೆ. ಬೆಳಿಗ್ಗೆ ಕುರಿ ಮೇಯಿಸಲು ಬೊಮ್ಮನಳ್ಳಿಯತ್ತ ತೆರಳಿದ್ದರು. ಮಧ್ಯಾಹ್ನ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದರು. ಇವರು ಕೂಡ ನದಿಯಲ್ಲಿ ಈಜಾಡುತ್ತಿರುವಾಗ ಘಟನೆ ನಡೆದಿದೆ.
ನದಿ ನೀರಲ್ಲಿ ಯಲ್ಲಪ್ಪ ಮುಳುಗುತ್ತಿದ್ದುದನ್ನು ಗಮನಿಸಿ ರಕ್ಷಿಸಲು ಮುಂದಾಗಿದ್ದ ನರೇಶ ಕೂಡ ಮೃತಪಟ್ಟಿದ್ದಾನೆ. ಇಬ್ಬರಿಗೂ ಈಜು ಬರುತ್ತಿತ್ತು ಎನ್ನಲಾಗಿದ್ದು, ನೀರಿನ ಆಳದ ಕುರಿತು ಮಾಹಿತಿ ಇರದೇ ಇರುವುದರಿಂದ ದುರಂತ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಮಳಖೇಡ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಕೆಲದಿನಗಳ ಹಿಂದೆ ಕಾಗಿಣಾ ನದಿಯಲ್ಲಿ ಈಜಲು ತೆರಳಿದ್ದ ನವೆಂಬರ್ 1ರಂದು ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಮೃತಪಟ್ಟಿದ್ದರು. ಘಟನೆ ಮಾಸುವ ಮುನ್ನವೇ ಮತ್ತಿಬ್ಬರು ನದಿ ಪಾಲಾಗಿದ್ದಾರೆ. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.