ಕಲಬುರಗಿ: ‘ಮೈಸೂರಿನ ಉದಯಗಿರಿ ಗಲಾಟೆ ಪ್ರಕರಣವು ಬಿಜೆಪಿ ಮತ್ತು ಸಂಘ ಪರಿವಾರದ ಕೃಪಾಪೋಷಿತ ಕುಕೃತ್ಯ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿ, ಅಲ್ಪಸಂಖ್ಯಾತರ ಮೇಲೆ ಗೂಬೆ ಕೂರಿಸಲು ಪ್ರಯತ್ನ ಮಾಡಿದ್ದರು. ಕೃತ್ಯ ಮಾಡಿದವರನ್ನು ಹಿಡಿದಾಗ ಸಂಘ ಪರಿವಾರದವರು ಎಂಬುದು ಗೊತ್ತಾಗಿತ್ತು. ಅದೇ ರೀತಿ ಇಲ್ಲಿಯೂ ಸಂಘ ಪರಿವಾರವಿದೆ’ ಎಂದು ದೂರಿದರು.
‘ಕೆಲವು ಕಡೆ ಬುರ್ಖಾ ಹಾಕಿಕೊಂಡು ಗಲಾಟೆ ಮಾಡಲು ಹೋಗುತ್ತಾರೆ. ಇದೇನು ಅವರಿಗೆ ಹೊಸದಲ್ಲ. ಬಿಜೆಪಿಯ ಪಿತೃಪಕ್ಷವಾದ ಸಂಘ ಪರಿವಾರಕ್ಕೆ ಈಗ 100 ವರ್ಷಗಳು ತುಂಬುತ್ತಿದೆ. ಅವರ ಎಲ್ಲ ರೀತಿಯ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅದು ಸಾಧ್ಯವಾಗಲ್ಲ. ಶಾಂತಿ ಕದಡಲೂ ನಾವು ಬಿಡುವುದಿಲ್ಲ’ ಎಂದರು.
‘ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಶಾಂತಿಯನ್ನು ಕದಡಲು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅವರು ಯಾರಾಗಿದ್ದರೂ ಸರಿ, ಯಾವುದೇ ಧರ್ಮ, ಜಾತಿಗೆ ಸೇರಿದವರು ಆಗಿದ್ದರೂ ಅವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವರಿಗೆ ಹೇಳುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.