ADVERTISEMENT

ಎಸ್‌ಬಿಆರ್‌ನಲ್ಲಿ ಉದ್ಯೋಗ ಮೇಳ

ಮೇಳಕ್ಕೆ ಡಿಸಿಪಿ ಡಿ.ಕಿಶೋರಬಾಬು ಚಾಲನೆ; 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:51 IST
Last Updated 3 ಮಾರ್ಚ್ 2021, 2:51 IST
ಉದ್ಯೋಗ ಮೇಳದ ಪೋಸ್ಟರ್‌ನ್ನು ಡಿಸಿಪಿ ಡಿ. ಕಿಶೋರ ಬಾಬು ಬಿಡುಗಡೆಗೊಳಿಸಿದರು. ಬಸವರಾಜ ದೇಶಮುಖ, ಡಾ. ನಿರಂಜನ ವಿ.ನಿಷ್ಠಿ, ಡಾ.ಅನೀಲಕುಮಾರ ಬಿಡವೆ, ಡಾ.ಲಿಂಗರಾಜ ಶಾಸ್ತ್ರಿ, ಡಾ.ಲಕ್ಷ್ಮಿ ಪಾಟೀಲ ಮಾಕಾ ಇದ್ದರು
ಉದ್ಯೋಗ ಮೇಳದ ಪೋಸ್ಟರ್‌ನ್ನು ಡಿಸಿಪಿ ಡಿ. ಕಿಶೋರ ಬಾಬು ಬಿಡುಗಡೆಗೊಳಿಸಿದರು. ಬಸವರಾಜ ದೇಶಮುಖ, ಡಾ. ನಿರಂಜನ ವಿ.ನಿಷ್ಠಿ, ಡಾ.ಅನೀಲಕುಮಾರ ಬಿಡವೆ, ಡಾ.ಲಿಂಗರಾಜ ಶಾಸ್ತ್ರಿ, ಡಾ.ಲಕ್ಷ್ಮಿ ಪಾಟೀಲ ಮಾಕಾ ಇದ್ದರು   

ಕಲಬುರ್ಗಿ: ‘ಉದ್ಯೋಗ ಆಕಾಂಕ್ಷಿಗಳಿಗೆ ಲಾಭದಾಯಕ ಉದ್ಯೋಗವನ್ನು ಪಡೆಯುವುದು ಎಲ್ಲದಕ್ಕೂ ಅಂತ್ಯವಲ್ಲ. ಆದರೆ ಉದ್ಯೋಗ ಪಡೆಯುವುದು ಯಶಸ್ವಿ ವೃತ್ತಿಪರ ವೃತ್ತಿಜೀವನವನ್ನು ನಿರ್ಮಿಸುವ ಮೊದಲ ಹೆಜ್ಜೆ’ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ. ಕಿಶೋರಬಾಬು ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯವು ಮಂಗಳವಾರ ಆಯೋಜಿಸಿದ್ದ ‘ಉದ್ಯೋಗ ಮೇಳ–2021’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಹೆಸರಾಂತ ಕೈಗಾರಿಕೆಗಳು ಮತ್ತು ಕಂಪನಿಗಳು ಭಾಗವಹಿಸಿವೆ. ಈ ಭಾಗದ ವಿದ್ಯಾರ್ಥಿಗಳಿಗೆ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದು ಶ್ಲಾಘನೀಯ’ ಎಂದರು.

‘ಉದ್ಯೋಗಾಕಾಂಕ್ಷಿಗಳ ಉದ್ದೇಶವು ಕೇವಲ ಕಂಪನಿಯಲ್ಲಿ ಅಥವಾ ಉದ್ಯಮದಲ್ಲಿ ಉದ್ಯೋಗ ಪಡೆಯುವುದಕ್ಕೆ ಸೀಮಿತವಾಗಿರಬಾರದು. ಅವಕಾಶ ಸಿಕ್ಕಾಗ ಉತ್ತಮ ಸಾಧನೆ ಮಾಡುವುದು ಮತ್ತು ವೃತ್ತಿಜೀವನದಲ್ಲಿ ಪರಾಕಾಷ್ಠೆ ಸಾಧಿಸುವುದು ಬಹಳ ಮುಖ್ಯ’ ಎಂದು ಹೇಳಿದರು.

ADVERTISEMENT

‘ವೃತ್ತಿಜೀವನದಲ್ಲಿ ಉನ್ನತ ಹುದ್ದೆಗಳನ್ನು ಸಾಧಿಸಲು ನಿಮಗೆ ದೊರೆತ ಕೆಲಸದ ಬಗ್ಗೆ ತಮ್ಮ ಜ್ಞಾನವನ್ನು ನಿಯಮಿತವಾಗಿ ನವೀಕರಿಸಿಕೊಳ್ಳಬೇಕು ಮತ್ತು ಅವರು ಕೆಲಸ ಮಾಡುತ್ತಿರುವ ಕೆಲಸ ಮತ್ತು ಉದ್ಯಮದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಇದಲ್ಲದೆ ನಿಮ್ಮ ಸಹೋದ್ಯೋಗಿಗಳು ಮತ್ತು ವೃತ್ತಿಯಲ್ಲಿ ಹಿರಿಯರಿಂದ ಗೌರವವನ್ನು ಪಡೆಯಲು ಪ್ರಮುಖ ವೃತ್ತಿಪರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

‘ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ ನಾಯಕನಾಗಬೇಕೆಂಬ ಆಕಾಂಕ್ಷೆ ಹೊಂದಿದೆ ಮತ್ತು ವಿಶ್ವ ಆರ್ಥಿಕ ಶಕ್ತಿಯಾಗುವ ಗುರಿಯನ್ನು ಸಾಧಿಸಲು ಹಾಗೂ ಭಾರತವನ್ನು ಸಶಕ್ತಗೊಳಿಸಲು ವಿವಿಧ ಕ್ಷೇತ್ರಗಳಲ್ಲಿ ತಮ್ಮ ನಾಯಕತ್ವದ ಸ್ಥಾನಗಳನ್ನು ಖಚಿತಪಡಿಸಿಕೊಳ್ಳುವ ಹೆಚ್ಚಿನ ಜವಾಬ್ದಾರಿಯನ್ನು ದೇಶದ ಯುವಕರು ಹೊಂದಿದ್ದಾರೆ’ ಎಂದು ಅವರು ಹೇಳಿದರು.

ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ಇಂದು ನಡೆದ ಉದ್ಯೋಗ ಮೇಳವು ನಮ್ಮ ವಿಶ್ವವಿದ್ಯಾಲಯ ನಡೆಸಿದ ಎರಡನೇ ಉದ್ಯೋಗ ಮೇಳವಾಗಿದೆ. ಮೊದಲನೆ ಮೇಳವು ಕೆಲವು ದಿನಗಳ ಹಿಂದೆ ಬೀದರ್‌ನಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಸಲಾಯಿತು. ಆಗ ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆ ಮತ್ತು ಉದ್ಯೋಗ ಕಂಪನಿಗಳು ತೋರಿಸಿದ ಉತ್ಸಾಹ ಅಮೋಘವಾಗಿತ್ತು’ ಎಂದು ಹೇಳಿದರು.

‘ಈ ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಇದರಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ’ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ವಿ.ನಿಷ್ಠಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಉಮಾ ಪಾಟೀಲ ಸ್ವಾಗತಿಸಿದರು ಮತ್ತು ಪ್ರಾಧ್ಯಾಪಕಿ ಶ್ವೇತಾ ಮಡಿವಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.