ADVERTISEMENT

ಅಸ್ಪೃಶ್ಯತೆ ನಿರ್ಮೂಲನೆಗೆ ಒಗ್ಗೂಡಿ; ಸಾಹಿತಿ ಧರ್ಮಣ್ಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 4:02 IST
Last Updated 4 ಜನವರಿ 2022, 4:02 IST
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಚಾಮನೂರ ಗ್ರಾಮದಲ್ಲಿ ಈಚೆಗೆ ನಡೆದ ಅಸ್ಪೃಶ್ಯತೆ ನಿರ್ಮೂಲನೆಯ ಜಾಗೃತಿ ಕಾರ್ಯಕ್ರಮದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಚಾಮನೂರ ಗ್ರಾಮದಲ್ಲಿ ಈಚೆಗೆ ನಡೆದ ಅಸ್ಪೃಶ್ಯತೆ ನಿರ್ಮೂಲನೆಯ ಜಾಗೃತಿ ಕಾರ್ಯಕ್ರಮದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು   

ಕಲಬುರಗಿ: ’ಶತಮಾನಗಳಿಂದ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆ ಮತ್ತು ಮೌಢ್ಯಾಚರಣೆಗಳ ನಿರ್ಮೂಲನೆಗೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು, ಸಂಘಟಿತರಾಗಿ ಅವುಗಳ ವಿರುದ್ಧ ಹೋರಾಡಬೇಕು‘ ಎಂದು ಸಾಹಿತಿ ಧರ್ಮಣ್ಣ ಎಚ್ ಧನ್ನಿ ಹೇಳಿದರು.

ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಚಾಮನೂರ ಗ್ರಾಮದ ದೇವಮ್ಮ ದೇವಸ್ಥಾನದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಸ್ಕಾರ ಪ್ರತಿಷ್ಠಾನ ಆಯೋಜಿಸಿದ್ದ ಅಸ್ಪೃಶ್ಯತೆ ನಿರ್ಮೂಲನಾ ಜನ ಜಾಗೃತಿ ಹಾಗೂ ಬೀದಿ ನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಇಂದು ಸರ್ವರಿಗೂ ಸಮ ಬಾಳು, ಸಮ ಪಾಲು ಅವಕಾಶ ಮಾಡಿ ಕೊಟ್ಟ ಸಂವಿಧಾನವನ್ನು ಎಲ್ಲರೂ ಅಧ್ಯಯನ ಮಾಡಬೇಕು. ಆ ಮೂಲಕ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಎಲ್ಲ ಸಮುದಾಯದ ಜನರು ಮುಂದಾಗಬೇಕು‘ ಎಂದು ಹೇಳಿದರು.

ADVERTISEMENT

ಕಡಬೂರ ಗ್ರಾ.ಪಂ ಸದಸ್ಯ ರಾಘು ದೊಡ್ಡಮನಿ ಹಾಗೂ ಸಂಗೀತ ಕಲಾವಿದ ಎಂ.ಎನ್ ಸುಗಂಧಿ ರಾಜಾಪೂರ ಅವರು ಮಾತನಾಡಿ, ಸ್ವಾಭಿಮಾನದ ಬದುಕು ಕಲ್ಪಿಸಿ ಕೊಟ್ಟ ಸಂವಿಧಾನದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ ದೊಡ್ಡ ಪೀಡುಗಾಗಿ ಕಾಡುತ್ತಿದೆ. ಮಹಾ ಪುರುಷರ ಹೋರಾಟ ಮತ್ತು ಚಿಂತನೆ ಗಳು ಅರ್ಥೈಸಿಕೊಳ್ಳಬೇಕು ಎಂದರು.

ಗ್ರಾ.ಪಂ ಉಪಾಧ್ಯಕ್ಷ ಖಾಜಾಸಾಬ್ ಜಮಾದಾರ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ ಅಮೃತ ದೊರೆ, ಕಾಶಪ್ಪ ಅಮಲಗೋಳ, ಮಾಜಿ ಅಧ್ಯಕ್ಷ ಭಗವಂತ ಎಂಟಮನೆ, ಭಗವಂತ ದೊರೆ, ಪೀರಪ್ಪ ಹಾದಿಮನಿ, ಸೋಫಿಸಾಬ್ ಇದ್ದರು. ಓಂ ಸಾಯಿ ಕಲಾ ತಂಡದ ಶಶಿಕಾಂತ ನಿರಗುಡಿ, ಜಯಶ್ರೀ ಗುತ್ತೇದಾರ, ಗಂಗುಬಾಯಿ, ಸಂದೀಪ ಕಾಳಕಿಂಗೆ ಅವರು ಬೀದಿ ನಾಟಕ
ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.