ಕಲಬುರಗಿ: ಕಾಲಿಗೆ ಗಾಯವಾಗಿ ರಕ್ತನಾಳದಿಂದ ರಕ್ತಪರಿಚಲನೆ ಬಂದ್ ಆಗಿದ್ದರಿಂದ ಕಾಲಿಗೆ ಗ್ಯಾಂಗ್ರೀನ್ ಆಗುವ ಹಂತ ತಲುಪಿದ್ದ 55 ವರ್ಷದ ನಗರದ ವ್ಯಕ್ತಿಯೊಬ್ಬರಿಗೆ ಇಲ್ಲಿನ ಚಿರಾಯು ಆಸ್ಪತ್ರೆಯ ವೈದ್ಯರು ಕಾಲಮಿತಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾಗಿ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ ದೋಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಾಲಿನ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಆಗದೇ ಇರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಕೊಂಚ ತಡವಾದರೂ ಎರಡೂ ಕಾಲುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದರು.
‘ಆಸ್ಪತ್ರೆಗೆ ದಾಖಲಾದ ತಕ್ಷಣವೇ ತಪಾಸಣೆ ನಡೆಸಿದಾಗ ಎರಡೂ ಕಾಲಿನ ರಕ್ತನಾಳಗಳು ಕೆಲಸ ಮಾಡದೇ ಇರುವುದು ಗೊತ್ತಾಯಿತು. ಕಳೆದ ನಾಲ್ಕು ತಿಂಗಳಿಂದ ರೋಗಿಗೆ ಈ ಸಮಸ್ಯೆ ಎದುರಾಗಿತ್ತು. ಡಾ. ವಿಶಾಲ ಹುಡಗಿ ನೇತೃತ್ವದ ತಜ್ಞ ವೈದ್ಯರ ತಂಡವು ಆರ್ಟೊಬಿಫೆಮೊರಲ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿತು’ ಎಂದರು.
‘ವ್ಯಕ್ತಿ ಧೂಮಪಾನ ಮಾಡುತ್ತಿರುವುದರಿಂದ ಜನರಲ್ ಅನಸ್ತೇಸಿಯಾ ಕೊಟ್ಟು ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನಿಂದ ಕೂಡಿತ್ತು. ಆದರೂ, ಅನಸ್ತೇಸಿಯಾ ತಜ್ಞರಾದ ಡಾ. ಸಂತೋಷ ಕಾಮಶೆಟ್ಟಿ ಹಾಗೂ ಡಾ. ಲಿಂಗರಾಜ ಅವರ ಸಹಕಾರದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿತು. ಆಸ್ಪತ್ರೆಗೆ ದಾಖಲಾದ ಐದನೇ ದಿನಕ್ಕೇ ಆಸ್ಪತ್ರೆಯಿಂದ ಮನೆಗೆ ಕಳಿಸಲಾಯಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.