ಸೇಡಂ: ‘ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬವು ತನ್ನದೆ ಆದ ವಿಶೇಷತೆಯನ್ನು ಹೊಂದಿದೆ. ಹಬ್ಬದ ಹಿಂದಿರುವ ಮಹತ್ವ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯವನ್ನು ಮಕ್ಕಳಿಗೆ ಪಾಲಕರು ತಿಳಿಸಿಕೊಡಬೇಕು’ ಎಂದು ವಿಶ್ವಹಿಂದು ಪರಿಷತ್ ಉತ್ತರ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೋಹರ್ ಮಠದ ಅಭಿಪ್ರಾಯಪಟ್ಟರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಶನಿವಾರ ನಡೆದ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಂದು ಧರ್ಮ ಮತ್ತು ಜಾತಿಯನ್ನು ತನ್ನೊಡೊಲೊಳಗಿರಿಸಿಕೊಂಡಿರುವ ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲ ಹಿಂದೂಗಳ ಮತಾಂತರ ನಡೆದಿರುವುದು ಅತ್ಯಂತ ದುಷ್ಟವಿಚಾರದ ಸಂಗತಿ’ ಎಂದು ತಿಳಿಸಿದರು.
ಹಬ್ಬಗಳಲ್ಲಿರುವ ನಮ್ಮ ಸಂಸ್ಕೃತಿ ಆಚರಣೆ ಇನ್ನೂ ಎತ್ತರಕ್ಕೆ ಬೆಳೆಯುವ ಉದ್ದೇಶ ಹಾಗೂ ಪರಸ್ಪರ ಸಂತಸ ವಿನಿಮಯದ ಇಂತಹ ಕಾರ್ಯ ಪ್ರತಿವರ್ಷ ನಡೆಯಲಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹಾರೈಸಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಜಗತ್ತಿನ ಮೊದಲ ಸಂಸತ್ ರಚನೆಯಾಗಿದ್ದು, ಕಲ್ಯಾಣ ನಾಡಿನ ಅನುಭವ ಮಂಟಪದಲ್ಲಿ. ಜಾತ್ಯಾತೀತವಾಗಿ ರಚನೆಯಾಗಿ ಸಾಮಾಜಿಕ ಸಾಮರಸ್ಯವನ್ನು ಸಮಾಜದಲ್ಲಿ ಬಿತ್ತಿದ ಮೊದಲ ಕೇಂದ್ರ ಕಲ್ಯಾಣ ನಾಡು. ಇಂತಹ ಸಮಾನತೆಯ ಕ್ರಾಂತಿಯ ವಿಚಾರಗಳು ಇಂದಿನ ಯುವಪೀಳಿಗೆ ಅರಿತುಕೊಳ್ಳುವುದು ಅವಶ್ಯಕತೆ ಇದೆ ಎಂದು ತಿಳಿಸಿದರು.
ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಸುಂದರ ಸಮಾಜ ನಿರ್ಮಾಣವಾಗಬೇಕು ಎಂದರೆ ಪ್ರಮುಖವಾಗಿ ಮನೆ, ದೇವಾಲಯ ಮತ್ತು ಶಿಕ್ಷಣ ಕೇಂದ್ರಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ಮಾಡಬೇಕು’ ಎಂದರು.
ಸಂಸದ ಡಾ.ಉಮೇಶ ಜಾಧವ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿದರು. ಶಿವಶಂಕರೇಶ್ವರ ಮಠದ ಶಿವಾಚಾರ್ಯ, ಪುರಸಭೆ ಅಧ್ಯಕ್ಷೆ ಚನ್ನಮ್ಮ ಪಾಟೀಲ ಇದ್ದರು. ಬಸವರಾಜ ರೇವಗೊಂಡ ಸ್ವಾಗತಿಸಿದರು. ವೀರೇಶ ಹೂಗಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.