ಕಲಬುರಗಿ: ವಿಶ್ವ ಹಿಂದೂ ಪರಿಷತ್ ಶ್ರೀರಾಮ ಪ್ರಖಂಡದ ವತಿಯಿಂದ ಗೋಪಾಷ್ಟಮಿ ಅಂಗವಾಗಿ ಸಾಮೂಹಿಕ ಗೋ ಆರಾಧನೆ ಕಾರ್ಯಕ್ರಮವನ್ನು ನಗರದ ಹೊಸ ಜೇವರ್ಗಿ ರಸ್ತೆಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿತ್ತು.
ಮಹಿಳೆಯರು ಗೋವನ್ನು ಶ್ರೀರಾಮ ಮಂದಿರದಲ್ಲಿ ಜಯ ಘೋಷಗಳೊಂದಿಗೆ ಸ್ವಾಗತಿಸಿ ಆರತಿ ಬೆಳಗಿದರು. ಅರ್ಚಕರು ಮಂಗಳಾರತಿ ಮತ್ತು ಪೂಜಾ ವಿಧಾನಗಳನ್ನು ಪೂರೈಸಿದರು
ಪಂಡಿತ್ ಗೋಪಾಲಾಚಾರ್ಯ ಅಕಮಂಚಿ ಮಾತನಾಡಿ, ಹಸುವಿನಲ್ಲಿ ಲಕ್ಷ್ಮಿ ಮತ್ತು ಗಂಗಾ ಮಾತೆ ಸಹಿತ ಮುಕ್ಕೋಟಿ ದೇವತೆಗಳ ವಾಸಸ್ಥಾನ ಇರುತ್ತದೆ. ಹಸುವಿನ ಪ್ರತಿಯೊಂದು ಉತ್ಪನ್ನ ಮಾನವನ ಆರೋಗ್ಯಕ್ಕೆ ಉಪಯುಕ್ತವಾದವು. ಗೋಮಯ ಮತ್ತು ಗೋಮೂತ್ರದಿಂದ ಕ್ಯಾನ್ಸರ್ನಂತಹ ರೋಗವನ್ನು ಗುಣಪಡಿಸಿದ ಉದಾರಣೆಗಳು ಇವೆ’ ಎಂದರು.
ವಿಶ್ವ ಹಿಂದೂ ಪರಿಷತ್ ಶ್ರೀರಾಮ ಪ್ರಖಂಡದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ‘ಹಿಂದುಗಳು ಇಂದು ಒಗ್ಗಟ್ಟಾಗಿರುವ ಪರಿಸ್ಥಿತಿ ಬಂದೊದಗಿದೆ. ಹಿಂದುಗಳ ಮೇಲಾಗುವ ಅನ್ಯಾಯ ದೌರ್ಜನ್ಯ ಮತಾಂತರ ಹೀಗೆ ಅನೇಕ ಸಮಸ್ಯೆಗಳನ್ನು ಪ್ರತಿದಿನ ಮಾಧ್ಯಮಗಳಲ್ಲಿ ನೋಡುತ್ತೇವೆ. ಹಿಂದುಗಳು ಒಂದಾಗದಿದ್ದರೆ ಮುಂದಿನ ಅಧೋಗತಿಗೆ ನಾವೇ ಕಾರಣರಾಗುತ್ತೇವೆ’ ಎಂದು ಹೇಳಿದರು.
ವಿದ್ಯಾಧರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ರಾಥೋಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಶ್ವೇತಾ ಸರಾಫ್ ವಂದಿಸಿದರು, ಸುಮಂಗಲಾ ಚಕ್ರವರ್ತಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಸುರೇಶ ಹೇರೂರು, ಮಾರ್ತಾಂಡ ಶಾಸ್ತ್ರಿ, ರವಿ ಲಾತೂರಕರ್, ಶೇಷಾದ್ರಿ ಕುಲಕರ್ಣಿ, ವಾಸುದೇವರಾವ್ ಕುಳಗೇರಿ, ರವೀಂದ್ರ ಕುಲಕರ್ಣಿ, ವೀರೇಶ ಕುಲಕರ್ಣಿ, ಮಲ್ಹಾರರಾವ್ ಗಾರಂಪಳ್ಳಿ, ಮುರಳೀಧರ್ ಕರಲಗಿಕರ್, ಪ್ರಶಾಂತ ಗುಡ್ಡಾ, ಮಲ್ಲಿಕಾರ್ಜುನ ಹೂಗಾರ, ಅಶ್ವಿನ್ ಕುಮಾರ್, ಸತೀಶ್ ಮಾಹೂರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.