ADVERTISEMENT

ಕಲಬುರ್ಗಿ: ‘ವಿಶ್ವಕರ್ಮ ಜಾತಿಯಲ್ಲ ಸಂಸ್ಕೃತಿ’

ಮಹೋತ್ಸವ, ವಿವಿಧ ಸಾಧಕರಿಗೆ ‘ವಿಶ್ವಶ್ರೀ’ ಪ್ರಶಸ್ತಿ ‍ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 9:23 IST
Last Updated 28 ಸೆಪ್ಟೆಂಬರ್ 2020, 9:23 IST
ಕಲಬುರ್ಗಿಯಲ್ಲಿ ಭಾನುವಾರ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದವರಿಗೆ ‘ವಿಶ್ವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಲಬುರ್ಗಿಯಲ್ಲಿ ಭಾನುವಾರ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದವರಿಗೆ ‘ವಿಶ್ವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕಲಬುರ್ಗಿ: ‘ವಿಶ್ವಕರ್ಮ ಸಮಾಜದವರು ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕೃತಿ ಕಾಪಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅದ್ಭುತ ಕೆತ್ತನೆಯ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮ ಶಿಲ್ಪಿಗಳಿಗೆ ಸಲ್ಲುತ್ತದೆ. ಇದೊಂದು ಒಂದು ಜಾತಿಯಲ್ಲ; ಸಂಸ್ಕೃತಿ’ ಎಂದು ಬಿಜೆಪಿ ಯುವ ಧುರೀಣ ಚಂದ್ರಕಾಂತ ಬಿ.ಜಿ. ಪಾಟೀಲ ಹೇಳಿದರು.

ಜಿಲ್ಲಾ ವಿಶ್ವಕರ್ಮ ಸಮಾಜ ಹೋರಾಟ ಸಮಿತಿ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ, ಉತ್ತರ ವಲಯದ ಸಹಯೋಗದೊಂದಿಗೆ ಭಾನುವಾರ ನಗರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ‘ವಿಶ್ವಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ.ಸುರೇಶ ಆರ್.ಸಜ್ಜನ್ ಮಾತನಾಡಿ, ‘ತನ್ನದೇ ಆದ ಪರಂಪರೆ, ಸಂಸ್ಕೃತಿ ಹೊಂದಿರುವ ವಿಶ್ವಕರ್ಮ ಸಮಾಜ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕಾದ ಅಗತ್ಯತೆ ಇದೆ. ಸಮಾಜದ ಅಭಿವೃದ್ಧಿಗೆ ಸರ್ವರೂ ಕೈ ಜೋಡಿಸಬೇಕಾಗಿದೆ. ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಮಾಜದ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಮಾತನಾಡಿ, ‘ಬಂಡೆಕಲ್ಲಿಗೆ ಅದ್ಭುತ ರೂಪ ಕೊಡುವ ಜನ ನಾವು. ಬಡವರು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಆಗಬೇಕಾಗಿದೆ’ ಎಂದು ಅವರು ಹೇಳಿದರು.

ಸಾಹಿತಿ ವಿಜಯಕುಮಾರ ತೇಗಲತಿಪ್ಪಿ,ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ್ ವಿ. ಗುತ್ತೇದಾರ, ಪ್ರಮುಖರಾದ ಯಲ್ಲಪ್ಪ ನಾಯಿಕೋಡಿ, ವಿಠಲರಾವ ಸುತಾರ, ಕೇಶವ ಸೀತನೂರ, ಕುಪ್ಪಣ್ಣ ಪೊದ್ದಾರ ಖೇಳಗಿಕರ್, ವೀರೇಶ ಕಲ್ಲೂರ, ಸಿದ್ಧಾರೂಢ ಕಲ್ಲೂರ, ವಿಜಯಕುಮಾರ ಬಂಗಾರಿ, ಅಶೋಕ ಮಾನಕರ್ ಮಾತನಾಡಿದರು.

ಆಲಮೇಲ ವಿಶ್ವಕರ್ಮ ಮೂಲಪೀಠ ಮೂರು ಝಾವದಮಠದ ರಾಮಚಂದ್ರ ಸ್ವಾಮೀಜಿ, ಅಫಜಲಪುರದ ವಿಶ್ವಕರ್ಮ ಜಗದ್ಗುರು ಮೂರು ಝಾವದೇಶ್ವರ ಮಠದ ಮೌನೇಶ್ವರ ಸ್ವಾಮಿಗಳು, ಪ್ರಣವ ನಿರಂಜನ ಸ್ವಾಮೀಜಿ ಇದ್ದರು.

ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ, ಅರುಣ ಕುಲಕರ್ಣಿ, ಶ್ರೀಕಾಂತ ಪಾಟೀಲ ತಿಳಗೂಳ, ಜಗನ್ನಾಥರಾವ ಪೊದ್ದಾರ, ರೇಣುಕಾ ಸರಡಗಿ, ಕಲ್ಯಾಣಕುಮಾರ ಶೀಲವಂತ, ಮನೋಹರ ಪೊದ್ದಾರ, ಶುಭಾಂಗಿ ನಿತೀನ್ ಐಹೊಳೆ, ಮಲ್ಲಿಕಾರ್ಜುನ ಕೋರವಾರಕರ್ ಅವರಿಗೆ ‘ವಿಶ್ವಶ್ರೀ’ ಪ್ರಶಸ್ತಿ ನೀಡಿ
ಗೌರವಿಸಲಾಯಿತು.

ಕೊರೊನಾ ಯೋಧರಾದ ಹಣಮಂತ ನಿಂಬಾಳಕರ್, ದಶರಥ ಮಾಡ್ಯಾಳ, ಲಕ್ಷ್ಮೀ, ಈರಣ್ಣ ಸರಸಂಬಿ, ಮಾಣಿಕರಾವ ಪೊದ್ದಾರ, ಶಿವಲಿಂಗ ಹಳಿಮನಿ, ನಾಗರಾಜ ಸ್ವಾದಿ, ಬಿ.ಎಸ್.ಮಾಲಿಪಾಟೀಲ, ಶರಣಬಸವ ಜಂಗಿನಮಠ ಅವರನ್ನು ಸಹ ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.