ವಾಡಿ:ನಿರಂತರ ಮಳೆಯಿಂದ ಹೊಲಗದ್ದೆಗಳಲ್ಲಿ ನೀರು ತುಂಬಿವೆ, ಕೊಳವೆಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಜಮೀನುಗಳು ಸಂಪೂರ್ಣವಾಗಿ ಜವಳು ಹಿಡಿದಿವೆ.
ಸತತ ಮಳೆಯ ಹಿನ್ನೆಲೆಯಲ್ಲಿ ಅಂತರ್ಜಲ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ರೈತರ ಹಲವು ಕೊಳವೆಬಾವಿಗಳಲ್ಲಿ ಕೇಸಿಂಗ್ ಪೈಪ್ ಮೂಲಕವೇ ನೀರು ಉಕ್ಕಿ ಹರಿಯುತ್ತಿದೆ, ಹಣ್ಣಿಕೇರಾ, ಯಾಗಾಪುರ, ಲಾಡ್ಲಾಪುರ, ಬಾಪುನಗರ, ಶಿವನಗರದ ಹಲವೆಡೆ ರೈತರ ಜಮೀನುಗಳಲ್ಲಿನ ಕೊಳವೆಬಾವಿಗಳು ನೀರಿನಿಂದ ಸಮೃದ್ಧಗೊಂಡಿದ್ದು ರೈತರು ಸಂತಸಗೊಂಡಿದ್ದಾರೆ. ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು ಕೆರೆಕಟ್ಟೆಗಳು ಭರ್ತಿಯಾಗಿವೆ.
ರಾಂಪುರಹಳ್ಳಿ ಕೆರೆಗೆ ಕೊಡಿ ಬಿದ್ದಿದ್ದು ನಾಲವಾರ ರಾಂಪುರಹಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನಗಳ ಓಡಾಟ ಸ್ಥಗಿತಗೊಂಡಿದೆ. ಲಾಡ್ಲಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಗ್ಗು ನೀರಿನಿಂದ ಭರ್ತಿಯಾಗಿದ್ದು ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ಕೊಲ್ಲೂರು ತರಕಸ್ಪೇಟ್ ರಸ್ತೆ ನಡುವಿನ ಹಳ್ಳಕ್ಕೆ ಭೀಮಾನದಿ ನೀರು ನುಗ್ಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.