ವಾಡಿ: ಬುಧವಾರ ರಾತ್ರಿಯಿಡೀ ಸುರಿದ ಅಬ್ಬರದ ಮಳೆಯಿಂದ ನಾಲವಾರ ವಲಯದಲ್ಲಿ ನಾನಾ ಅವಾಂತರ ಸೃಷ್ಟಿಸಿದೆ. ವಿವಿಧ ಗ್ರಾಮಗಳ ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಯನ್ನೆಲ್ಲಾ ಆಪೋಷನ ತೆಗೆದುಕೊಂಡಿದೆ.
ಕುಂಬಾರಹಳ್ಳಿ ಕೆರೆಯ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ. ನಾಲವಾರ– ಸಂಕನೂರು ರಸ್ತೆ ಮೇಲೆ ಕೆರೆ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ಬಳವಡಗಿ ಗ್ರಾಮಕ್ಕೆ ಹಿರೇಹಳ್ಳದ ನೀರು ಹೊಕ್ಕಿದ್ದು ಮಧ್ಯರಾತ್ರಿಯಿಂದಲೇ ಬಳವಡಗಿ ಮತ್ತು ಕೊಂಚೂರು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬಳವಡಗಿಯ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ನೀರು ಹೊಕ್ಕು ಗ್ರಾಮಸ್ಥರು ತತ್ತರಿಸುವಂತೆ ಆಗಿದೆ. ಗ್ರಾಮಸ್ಥರು ನಿದ್ದೆ ಮರೆತು ಜಾಗರಣೆ ಮಾಡಿದರು.
ರಾಶಿ ಕಣ ಹೊಕ್ಕ ಹಳ್ಳ: ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಹೊರವಲಯದ ದರ್ಗಾದ ವಿಶಾಲ ಆವರಣದಲ್ಲಿನ ನೂರಾರು ರೈತರ ರಾಶಿಕಣಕ್ಕೆ ಹಳ್ಳದ ನೀರು ನುಗ್ಗಿದ್ದು ಹೆಸರು ಕೊಚ್ಚಿಕೊಂಡು ಹೋಗಿದೆ. ರಾಶಿ ಮಾಡಿ ಒಣಗಿಸಲು ಬಿಟ್ಟಿದ್ದ ಹೆಸರುಕಾಳು ಮಳೆಯಿಂದ ಮತ್ತು ಹಿರೇಹಳ್ಳದ ರಭಸಕ್ಕೆ ಸಂಪೂರ್ಣ ಹಾಳಾಗಿದೆ.
ಸ್ಥಳೀಯ ರೈತರಾದ ಮುನಿಂದ್ರ ಕೊಟಗಿ, ರಸೂಲ ಪಟೇಲ್, ಶಿವಯೋಗಿ ಹೊಸ್ಸುರ, ಬಸವರಾಜ ಹೂಗಾರ, ವಾಡಿ ಸಾಹೇಬ್ ಸೇರಿ 10ಕ್ಕೂ ಅಧಿಕ ರೈತರ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ನೀರಿನಿಂದ ತೊಯ್ದು ತೊಪ್ಪೆಯಾದ ಹೆಸರು ಕಂಡು ರೈತರು ಮಮ್ಮಲ ಮರುಗುತ್ತಿದ್ದಾರೆ.
ಪರಿಹಾರಕ್ಕೆ ಒತ್ತಾಯ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಐಕೆಕೆಎಂಎಸ್ ರೈತ ಸಂಘಟನೆ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರನ್ನು ಸಂಪರ್ಕಿಸಿ ಹಳ್ಳದ ನೀರಿನಿಂದ ಬೆಳೆ ಹಾಳಾಗಿದ್ದು, ಬೆಳೆನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘಟನೆಯ ಸ್ಥಳೀಯ ಅಧ್ಯಕ್ಷ ಭೀಮಪ್ಪ ಮಾಟ್ನಳ್ಳಿ ಹಾಗೂ ಕಾರ್ಯದರ್ಶಿ ಸಾಬಣ್ಣ ಸುಣಗಾರ ಸೂಕ್ತ ಪರಿಹಾರ ನೀಡಿ ರೈತರಿಗೆ ಆಸರೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಕೊಲ್ಲೂರು ಗ್ರಾ.ಪಂ ಕಚೇರಿಗೆ ಜಲ ದಿಗ್ಬಂಧನ: ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಾ.ಪಂ ಕಚೇರಿಗೆ ಮಳೆ ನೀರು ನುಗ್ಗಿದ್ದರಿಂದ ಯಂತ್ರೋಪಕರಣ, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ದಾಖಲೆಪತ್ರಗಳು ಹಾಳಾಗಿವೆ. ಸಭಾಂಗಣ, ಕಂಪ್ಯೂಟರ್ ಕೋಣೆ, ಸ್ಟೋರ್ ರೂಮ್ಗೆ ಅಪಾರ ಪ್ರಮಾಣದ ನೀರು ಹೊಕ್ಕಿದೆ. ಅಂಗಳದಲ್ಲಿ 4 ಅಡಿಗೂ ಅಧಿಕ ನೀರು ನಿಂತಿದ್ದು ಸಾರ್ವಜನಿಕರು ಕುಳಿತುಕೊಳ್ಳುವ ಆಸನಗಳು ಮುಳುಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
₹4 ಲಕ್ಷದ ವಿದ್ಯುತ್ ಬಲ್ಬ್ ಹಾಳು: ಗ್ರಾಮದ ಕಂಬಗಳಿಗೆ ಹಾಕುವ ಉದ್ದೇಶದಿಂದ ಸೋಮವಾರ ಖರೀದಿಸಿ ಸ್ಟೋರ್ ರೂಮ್ನಲ್ಲಿ ಇಟ್ಟಿದ್ದ ಅಂದಾಜು ₹4 ಲಕ್ಷ ಮೌಲ್ಯದ ವಿದ್ಯುತ್ ಬಲ್ಬ್ಗಳು ಮಳೆ ನೀರಿನಿಂದ ಹಾಳಾಗಿವೆ ಎಂದು ಗ್ರಾ.ಪಂ ಸದಸ್ಯ ಈರಣ್ಣ ಭಜಂತ್ರಿ, ಶ್ರೀನಾಥ ಬೋಯರ್, ಭೀಮಾಶಂಕರ ತೇಲಕರ ತಿಳಿಸಿದ್ದಾರೆ.
ಏಲಾಂಬಿಕಾ ದೇವಸ್ಥಾನ ಜಲ ದಿಗ್ಬಂಧನ: ಚಿತ್ತಾಪುರ ತಾಲ್ಲೂಕಿನ ಬಳವಡಗಿ ಏಲಾಂಬಿಕಾ ದೇವಸ್ಥಾನಕ್ಕೆ ಹಳ್ಳದ ನೀರು ಹರಿದು ಜಲ ದಿಗ್ಬಂಧನ ಉಂಟಾಗಿದೆ. ದೇವಸ್ಥಾನ ಅಂಗಳದಲ್ಲಿ 4 ಅಡಿಗೂ ಅಧಿಕ ನೀರು ನಿಂತಿದೆ. ಅಂಗಳದಲ್ಲಿನ ಕೋಣೆಗಳಿಗೂ ನೀರು ನುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.