ಕಲಬುರ್ಗಿ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಾದ ಡಿ. 6ರಂದು ಮುಂಬೈಗೆ ಹೋಗಲು ಡಿ. 4ರಿಂದ 10ರವರೆಗೆ ರೈಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ರೈಲು ನಿಲ್ದಾಣದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
‘ಈ ಕಾರ್ಯಕ್ರಮಕ್ಕೆ ಪ್ರತಿವರ್ಷ ಕಲ್ಯಾಣ ಕರ್ನಾಟಕ ಭಾಗದಿಂದ ಸಾವಿರಾರು ಮಂದಿ ಹೋಗುತ್ತಾರೆ. ಆದರೆ, ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಹಲವರು ಅವಕಾಶ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ರೈಲು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಇಲ್ಲಿನ ರೈಲು ನಿಲ್ದಾಣದ ಅಧಿಕಾರಿ ಮೂಲಕ ಸೊಲ್ಲಾಪುರ ರೈಲ್ವೆ ವಿಭಾಗೀಯ ಕಚೇರಿಯ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದ ಮುಖಂಡರು, ‘ರೈಲ್ವೆ ಹಳಿಗಳ ಕಾಮಗಾರಿ ನಡೆದಿರುವುದರಿಂದ ರಾಯಚೂರು, ಯಾದಗಿರಿ, ಕಲಬುರ್ಗಿ ಮಾರ್ಗವಾಗಿ ಮುಂಬಯಿಗೆ ಪ್ರತಿನಿತ್ಯ ಸಂಚರಿಸುವ ರೈಲುಗಳ ಸಂಚಾರ ತಡೆ ಹಿಡಿಯಲಾಗಿದೆ. ಆದಾಗ್ಯೂ, ಡಿ. ರಂದು ಅಂಬೇಡ್ಕರ್ ಅವರ ಮಹಾ ಪರಿನಿರಿವಾಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವಾರು ಜನ ಮುಂಗಡ ಟಿಕೆಟ್ ಪಡೆದುಕೊಂಡಿದ್ದಾರೆ. ಆದ್ದರಿಂದ ರೈಲು ಪರ್ಯಾಯ ಸಂಚಾರ ಸೌಲಭ್ಯ ಒದಗಿಸಬೇಕು’ ಎಂದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಸಚಿನ್ ಫರತಾಬಾದ್ ನೇತೃತ್ವದಲ್ಲಿ ಸುರೇಶ ಹನಗುಡಿ, ಖಾಜಾಪಾಷಾ ಬಾಗಬಾನ, ಅಂಬು ಮಸ್ಕಿ, ಸತೀಶ ಫರತಾಬಾದ್, ಸುನಿಲ ಚವ್ಹಾಣ, ಆಯೇಜ್ ಬಾಗಬಾನ್, ಖಲೀಲ್ ಅಹ್ಮದ್, ಮಹಿಬೂಬ್ ಅಲಿ ಬಾಗಬಾನ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.