ADVERTISEMENT

ಕಾಡುಹಂದಿ ದಾಳಿ: ಕುರಿಗಾಹಿ ಸಾವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 15:47 IST
Last Updated 6 ಜೂನ್ 2020, 15:47 IST

ಕಮಲಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಅಂಬಲಗಿ ಗ್ರಾಮದಲ್ಲಿಕಾಡುಹಂದಿ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಕುರಿಗಾಹಿ ಬಾಲಕ ಶಿವಕುಮಾರ ವಿಜಯಕುಮಾರ ಹೆಳವ (16) ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ಕುರಿ ಮೇಯಿಸಲು ಹೊಲಕ್ಕೆ ತೆರಳಿದ್ದಾಗ ಹಿಂದಿನಿಂದ ಹಂದಿ ದಾಳಿ ಮಾಡಿದೆ. ರಕ್ತದ ಮಡುವಿನಲ್ಲಿ ಈ ಬಾಲಕ ಬಿದ್ದಿರುವುದನ್ನು ಮಧ್ಯಾಹ್ನ 1ರ ಸುಮಾರಿಗೆ ಗಮನಿಸಿದರೈತರೊಬ್ಬರು ಅವರ ತಾಯಿಗೆ ವಿಷಯ ತಿಳಿಸಿದ್ದಾರೆ. ತಾಯಿ ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ, ಟ್ರ್ಯಾಕ್ಟರ್‌ನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎಂದುಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಆಳಂದದ ವಲಯ ಅರಣ್ಯ ಅಧಿಕಾರಿ ಜಗನ್ನಾಥ ಬಿ.ಕೊರಳ್ಳಿ ಮಾತನಾಡಿ, ‘ದೇಹದ ಸೂಕ್ಷ್ಮ ಭಾಗದಲ್ಲಿ ಗಾಯವಾಗಿದ್ದು ಅಧಿಕ ರಕ್ತ ಸ್ರಾವವಾಗಿದೆ. ಹೊಲದಲ್ಲಿ ಯಾರ ಗಮನಕ್ಕೂ ಬಾರದ ಕಾರಣ ಆಸ್ಪತ್ರೆಗೆ ಸಾಗಿಸಲು ವಿಳಂಬವಾಗಿದೆ. ಹೀಗಾಗಿ ಬಾಲಕ ಮೃತಪಟ್ಟಿದ್ದಾನೆ. ಸರ್ಕಾರದಿಂದ ಸಿಗುವ ಪರಿಹಾರಕ್ಕೆ ಸಂಬಂಧಿಸಿದ ನಿಯಮ ಪಾಲಿಸಲು ತಿಳಿಸಿದ್ದೇವೆ. ಜೂನ್ 7ರಂದು ಬೆಳಿಗ್ಗೆ ಮೃತ ಬಾಲಕನ ಮನೆಗೆ ನಾವೂ ಭೇಟಿ ನೀಡಿ ಸರ್ಕಾದಿಂದ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.