
ಚಿತ್ತಾಪುರ: ‘ಹೆಣ್ಣು ಮನಸ್ಸು ಮಾಡಿದರೆ ಅಸಾಧ್ಯವಾದದ್ದು ಯಾವುದು ಇಲ್ಲ. ಮನೆ ನಿರ್ವಹಿಸುವ ಹೆಣ್ಣು ರಾಷ್ಟ್ರವನ್ನು ಮುನ್ನಡೆಸಬಲ್ಲಳು’ ಎಂದು ಸೇಡಂನ ನರ್ಮದಾದೇವಿ ಗಿಲಾಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಗದೀಶ್ವರಿ ಯರಗೋಳ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಪ್ರಾರ್ಥನಾ ಪೂರ್ವ ಪ್ರಾಥಮಿಕ ಮತ್ತು ವೀರಭದ್ರೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಈಚೆಗೆ ಮಾತೆಯರಿಗಾಗಿ ಆಯೋಜಿಸಿದ್ದ ಸಪ್ತಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
‘ದೇಶದ ಮುಂದಿನ ಭವಿಷ್ಯ ಇಂದಿನ ಮಕ್ಕಳಾಗಿದ್ದಾರೆ. ತಾಯಿಯ ಪ್ರಭಾವ ಮಕ್ಕಳ ಮೇಲೆ ಬೀರುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು’ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ನರ್ಮದಾದೇವಿ ಗಿಲಾಡ ಕನ್ಯಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಅನಂತಮ್ಮ ರೆಡ್ಡಿ ಮಾತನಾಡಿದರು. ಸಂಗೀತ ವೀರಣ್ಣಾ ಸುಲ್ತಾನಪುರ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕಿ ಭಾರತಿ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಶಿಕ್ಷಕಿ ರೋಜ್ ಮೇರಿ, ಶರಣಕುಮಾರಿ ವೇದಿಕೆ ಮೇಲಿದ್ದರು. ವಿದ್ಯಾರ್ಥಿನಿಯರಾದ ಭಾಗ್ಯಲಕ್ಷ್ಮಿ ನಿರೂಪಿಸಿದರು. ಆರ್.ಸುಮನ್ನಾ ಸ್ವಾಗತಿಸಿದರು. ಆದಿತಿ ವಂದಿಸಿದರು.
ಛದ್ಮ ವೇಷ ಧರಿಸಿದ ಮಕ್ಕಳು:
ಗಗನ ಯಾತ್ರಿ ಕಲ್ಪನಾ ಚಾವ್ಲಾ, ಸಾವಿತ್ರಿಬಾಯಿ ಫುಲೆ, ಸಾಲುಮರದ ತಿಮ್ಮಕ್ಕ, ಭಾರತ ಮಾತೆ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಸೇರಿ ವಿವಿಧ ಮಹಿಳಾ ಕ್ರಾಂತಿಕಾರಿಗಳ ಛದ್ಮವೇಷದಲ್ಲಿ ಶಾಲೆಯ ಮಕ್ಕಳು ಗಮನ ಸೇಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.