ADVERTISEMENT

ವಿಶ್ವ ಪ್ರವಾಸೋದ್ಯಮ ದಿನ | ಹೊರಜಗತ್ತಿನಿಂದ ದೂರವೇ ಉಳಿದ ಕೋಟೆ, ಬೌದ್ಧ ಶಾಸನ

ಪ್ರೇಕ್ಷಣೀಯ ಸ್ಥಳಗಳಲ್ಲಿ ಮೂಲಸೌಕರ್ಯಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 9:11 IST
Last Updated 27 ಸೆಪ್ಟೆಂಬರ್ 2019, 9:11 IST
ಐತಿಹಾಸಿಕ ಮಹತ್ವದ ಕಲಬುರ್ಗಿಯ ಬಹಮನಿ ಕೋಟೆ
ಐತಿಹಾಸಿಕ ಮಹತ್ವದ ಕಲಬುರ್ಗಿಯ ಬಹಮನಿ ಕೋಟೆ   

ಕಲಬುರ್ಗಿ: ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾದ ಕಲಬುರ್ಗಿ ಸೀಮೆಯಲ್ಲಿ ಹಲವಾರು ಐತಿಹಾಸಿಕ, ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳಿದ್ದರೂ ರಾಜ್ಯ, ಹೊರರಾಜ್ಯಗಳಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸೂಕ್ತ ಇತಿಹಾಸದ ಬಗ್ಗೆ ಮಾಹಿತಿ ಸಿಗದೇ ಇರುವುದರಿಂದ ಪ್ರವಾಸೋದ್ಯಮದಲ್ಲಿ ಬೆಳೆಯಬೇಕೆಂಬ ಕನಸು ನನಸಾಗಿಯೇ ಇಲ್ಲ.

ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ), ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆಯ ಇಚ್ಛಾಶಕ್ತಿಯ ಕೊತೆಯಿಂದಾಗಿ ನಗರದಲ್ಲೇ ಇರುವ ಕೋಟೆ ಕೊತ್ತಲುಗಳು ಹಾಗೂ ಅವುಗಳ ಐತಿಹಾಸಿಕ ಮಹತ್ವ ಪ್ರವಾಸಿಗರ ನಜರಿಗೆ ಬಂದೇ ಇಲ್ಲ ಎಂಬುದು ಇತಿಹಾಸದಲ್ಲಿ ಆಸಕ್ತಿ ಉಳ್ಳವರ ಅಳಲು.

ಪ್ರಿಯಾಂಕ್‌ ಖರ್ಗೆ ಅವರು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಕಲಬುರ್ಗಿಯ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್‌ ದರ್ಗಾ, ಬುದ್ಧ ವಿಹಾರ, ಗಾಣಗಾಪುರದ ದತ್ತ ಪೀಠ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯಲು ಪ್ರವಾಸೋದ್ಯಮ ಇಲಾಖೆಯಿಂದ ಬಸ್‌ ವ್ಯವಸ್ಥೆ ಮಾಡಿದ್ದರು. ಆದರೆ, ಕೆಲವು ದಿನಗಳವರೆಗೆ ಓಡಿದ ಬಸ್‌ ಮತ್ತೆ ಸಂಚಾರ ಸ್ಥಗಿತಗೊಳಿಸಿತು!

ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು ಈ ಭಾಗದ ಆರು ಜಿಲ್ಲೆಗಳ ಇತಿಹಾಸವನ್ನು ರಚಿಸಲು ಮಂಡಳಿ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಇತ್ತೀಚೆಗಷ್ಟೇ ಸಮಿತಿ ಸಭೆ ನಡೆದಿದ್ದು, ಇತಿಹಾಸ ಪುಸ್ತಕ ಹೊರಗೆ ಬರಲು ಇನ್ನಷ್ಟು ಸಮಯ ಬೇಕು. ಹೀಗಾಗಿ ಈ ಭಾಗದ ಪ್ರಾಗೈತಿಹಾಸ, ಶರಣರ ಕಲ್ಯಾಣ ಕ್ರಾಂತಿ, ಬಹಮನಿಗಳ ಕೋಟೆ, ಬಂದಾನವಾಜರ ಸುಧಾರಣಾ ಕ್ರಮಗಳು, ಹೈದರಾಬಾದ್‌ ನಿಜಾರ ಆಡಳಿತ, ರಜಾಕರ ದೌರ್ಜನ್ಯ ಮತ್ತಿತರ ಸಂಗತಿಗಳನ್ನು ಅರಿಯಬೇಕೆಂದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸದ್ಯಕ್ಕೆ ಅಧ್ಯಯನ ಭಾಗ್ಯವಂತೂ ಇಲ್ಲ.

ನಗರದ ಮಧ್ಯ ಭಾಗದಲ್ಲಿರುವ ಬಹಮನಿ ಕೋಟೆಯ ಒತ್ತವುವರಿ ಸಮಸ್ಯೆಯು ರಾಜಕೀಯ ಮೇಲಾಟದಲ್ಲಿ ಒಂದು ನಿರ್ಣಾಯಕ ಹಂತವನ್ನು ಇನ್ನೂ ತಲುಪಿಲ್ಲ. ಜಿಲ್ಲಾಡಳಿತವೂ ಒತ್ತುವರಿ ತೆರವುಗೊಳಿಸಲುನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದಿರುವುದರಿಂದ ಕೋಟೆ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಾರಾಯಣ ಜೋಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.