ADVERTISEMENT

ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ: ಯುವ ಕಾಂಗ್ರೆಸ್‌ ದಿಢೀರ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:36 IST
Last Updated 16 ಅಕ್ಟೋಬರ್ 2025, 7:36 IST
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಯುವ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಬುಧವಾರ ಟೈರ್ ದಹಿಸಿ ಪ್ರತಿಭಟಿಸಲಾಯಿತು
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಯುವ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಬುಧವಾರ ಟೈರ್ ದಹಿಸಿ ಪ್ರತಿಭಟಿಸಲಾಯಿತು   

ಕಲಬುರಗಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಯನ್ನು ನಿಷೇಧಿಸುವಂತೆ ಸಿಎಂಗೆ ಪತ್ರ ಬರೆದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ದುಷ್ಕರ್ಮಿಗಳಿಂದ ಬೆದರಿಕೆ ಕರೆಗಳು ಬರುತ್ತಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ದಿಢೀರ್ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮಾನವ ಸರಪಳಿ ರಚಿಸಿ ವಾಹನಗಳ ಸಂಚಾರ ತಡೆದರು. ‘ಆರ್‌ಎಸ್‌ಎಸ್‌ ನಿಷೇಧಿಸಿ’, ‘ಆರ್‌ಎಸ್‌ಎಸ್‌ಗೆ ಧಿಕ್ಕಾರ’, ಎಂದು ಘೋಷಣೆ ಮೊಳಗಿಸಿದರು. ಭಿತ್ತಿಪತ್ರ ಪ್ರದರ್ಶಿಸಿ, ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ‘ಆರ್‌ಎಸ್‌ಎಸ್ ಬ್ಯಾನ್‌’, ‘ನಾವು ನಿಮ್ಮೊಂದಿಗೆ ಇದ್ದೇವೆ, ಪ್ರಿಯಾಂಕ್‌ ಖರ್ಗೆ’ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಈ ವೇಳೆ ಮಾತನಾಡಿದ ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ‘ಆರ್‌ಎಸ್ಎಸ್‌ ಗೂಂಡಾ ಸಂಘಟನೆ. ಅದು ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಸಂಘಟನೆ. ಅಂಥ ಆರ್‌ಎಸ್‌ಎಸ್‌ ಚಟುವಟಿಕೆಗೆ ಸರ್ಕಾರಿ ಸ್ಥಳಗಳಲ್ಲಿ ಅವಕಾಶ ನೀಡದಂತೆ ಕೋರಿ ಪತ್ರ ಬರೆದಿದ್ದಾರೆ. ಇದನ್ನು ಸಹಿಸದೇ ದುಷ್ಕರ್ಮಿಯೊಬ್ಬ ಫೋನ್‌ ಕರೆ ಮಾಡಿ ಬೆದರಿಕೆಯೊಡ್ಡಿದ್ದಾನೆ. ಆರ್‌ಎಸ್‌ಎಸ್‌ಗೆ ನಿಜವಾಗಿಯೂ ಶಕ್ತಿಯಿದ್ದರೆ ರಸ್ತೆಗೆ ಬಂದು ಮಾತನಾಡಲಿ. ಅವರಿಗೆ ಉತ್ತರಿಸಲು ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳು ತಯಾರಿದ್ದೇವೆ. ಆರ್‌ಎಸ್‌ಎಸ್‌ ಗೂಂಡಾಗಳು ಫೋನ್‌ ಕರೆ ಮಾಡಿ ಬೆದರಿಕೆ ಒಡ್ಡುವುದನ್ನು ಸಹಿಸಲ್ಲ’ ಎಂದು ಗುಡುಗಿದರು.

ADVERTISEMENT

ಮುಖಂಡ ದಿನೇಶ ದೊಡ್ಡಮನಿ, ‘ಸಚಿವ ಪ್ರಿಯಾಂಕ್‌ ಖರ್ಗೆ ಹಿಂದೆ ವಿಚಾರಶಕ್ತಿಯುಳ್ಳ ದೊಡ್ಡ ಸಮೂಹ ಇದೆ. ಬಿಜೆಪಿ–ಆರ್‌ಎಸ್‌ಎಸ್‌ ಟೀಕೆ–ಟಿಪ್ಪಣಿ–ಬೆದರಿಕೆಗಳಿಗೆ ಅವರು ಹೆದರಲ್ಲ. ಬಿಜೆಪಿ, ಆರ್‌ಎಸ್‌ಎಸ್‌ಗೆ ನಿಜವಾಗಿಯೂ ಜವಾಬ್ದಾರಿ ಇದ್ದರೆ, ಅವಾಚ್ಯವಾಗಿ ನಿಂದಿಸಿರುವವರನ್ನು ಖಂಡಿಸಬೇಕು. ಅಂಥವರ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಆರ್‌ಎಸ್‌ಎಸ್‌ನಲ್ಲಿ ವಿಷ ಬೀಜಗಳು, ವಿಷ ಜಂತುಗಳಿವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ನಿಷೇಧಿಸುವ ನಿಲುವು ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇವಲ ಒಂದಷ್ಟೇ ಬೆದರಿಕೆ ಕರೆ ಬಂದಿಲ್ಲ. ಹಲವೆಡೆಯಿಂದ ಕರೆಗಳು ಬಂದಿದೆ. ಅವರನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಕೀಲ್‌ಅಹ್ಮದ್ ಸರಡಗಿ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಡಾ.ಕಿರಣ ದೇಶಮುಖ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ ಸೇರಿದಂತೆ ಹಲವರು ಮಾತನಾಡಿದರು.

ಮುಖಂಡರಾದ ರಾಜೀವ ಜಾನೆ, ಪ್ರಕಾಶ ಕಪನೂರ್, ರೇಣುಕಾ ಹೊಳ್ಕರ್, ಈರಣ್ಣ ಜಳಕಿ, ಶಿವಾನಂದ ಹೊನಗುಂಟಿ, ದೇವೇಂದ್ರ ಸಿನ್ನೂರ್, ಅಶ್ವಿನ್ ಸಂಕಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.