
ಕಾಳಗಿ: ‘ಯಾವುದೇ ದೇಶ ಅಥವಾ ರಾಷ್ಟ್ರ ಕಟ್ಟುವಲ್ಲಿ ಆ ದೇಶದ ಯುವಕರ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಬೋನಾಳ ಅಭಿಪ್ರಾಯಪಟ್ಟರು.
ಬುಧವಾರ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ತಮ್ಮ ಕಾಲೇಜಿನ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
‘ಹಳ್ಳಿಗಳ ಅಭಿವೃದ್ಧಿ ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರ ಜವಾಬ್ದಾರಿ ಕೂಡ ಆಗಿದೆ’ ಎಂದರು.
ಶಿಬಿರದ ಕಾರ್ಯಕ್ರಮಾಧಿಕಾರಿ ಸುಭಾಷ ಶೀಲವಂತ ಮಾತನಾಡಿ ‘ಹಳ್ಳಿಗಳು ಬದಲಾವಣೆಯಾದರೆ ಇಡಿ ದೇಶವೇ ಬದಲಾವಣೆ ಆದಂತೆ. ನಮ್ಮ ರಾಷ್ಟ್ರ ನಾಯಕರ ಕನಸು ಕೂಡ ಇದೇ ಆಗಿತ್ತು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಎಲ್ಮಡಗಿ ಉದ್ಘಾಟಿಸಿದರು. ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶರೆಡ್ಡಿ ಕಪ್ಪರಗಿ ಧ್ವಜಾರೋಹಣ ಮಾಡಿದರು.
ಗ್ರಾ.ಪಂ ಉಪಾಧ್ಯಕ್ಷೆ ಬಾನುಬೇಗಂ ಅಹ್ಮದ್ ಪಾಶಾ, ಮುಖ್ಯಶಿಕ್ಷಕಿ ರಾಚಮ್ಮ ಮಠಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಿಂದ್ರ ಪೂಜಾರಿ, ಗ್ರಾ.ಪಂ ಸದಸ್ಯ ಆನಂದಕುಮಾರ ಜಾಧವ, ಮಾಜಿ ಸದಸ್ಯ ಮಲ್ಲಪ್ಪ ಚಿಂತಕುಂಟಾ, ಶಿಬಿರಾಧಿಕಾರಿ ವಿರೇಶ ಭರಮಶೆಟ್ಟಿ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಶೌಕತ್ ಅಲಿ ನಾವದಗೀಕರ್ ನಿರೂಪಿಸಿ, ಸುರೇಶ ನಾಗೂರೆ ವಂದಿಸಿದರು. ಶಿಬಿರಾರ್ಥಿಗಳು ಇದ್ದರು. ಶಿಬಿರ ನ.4ರಂದು ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.