ಶನಿವಾರಸಂತೆ: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುಗಳಲೆ ಗ್ರಾಮ ಮೂರು ಮುಖ್ಯರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಆಗಿದ್ದು, ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ವಾಹನಗಳು ನಿಲ್ಲಲಿವೆ. ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣಕ್ಕೆ ಹೊಂದಿಕೊಂಡ ಗುಡುಗಳಲೆ ಗ್ರಾಮ ವ್ಯಾಪಾರಿ ಕೇಂದ್ರವಾಗಿ ಬೆಳೆಯುತ್ತಿದೆ. ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಸೋಮವಾರಪೇಟೆ, ಮಡಿಕೇರಿ, ಕೊಡ್ಲಿಪೇಟೆಗೆ ಹೋಗುವ ಸರ್ಕಾರಿ, ಖಾಸಗಿ ಬಸ್ಸುಗಳು, ವಾಹನಗಳು ಹಾಗೂ ಪ್ರವಾಸಿ ವಾಹನಗಳು ಗುಡುಗಳಲೆ ಜಂಕ್ಷನ್ ಮೂಲಕ ಹಾದು ಹೋಗಬೇಕು.
ಈ ಜಂಕ್ಷನ್ನಲ್ಲೇ ಪ್ರಯಾಣಿಕರು ಬಸ್ಸುಗಳಿಗಾಗಿ ಕಾಯುತ್ತಾರೆ. ಪೊಲೀಸ್ ಇಲಾಖೆಯು ಇಲ್ಲಿ ಸಿಬ್ಬಂದಿ ನಿಯೋಜಿಸಿದ್ದರೂ ಪರಿಹಾರ ಸಿಕ್ಕಿಲ್ಲ. ಈ ಜಂಕ್ಷನ್ನಲ್ಲಿ ರಸ್ತೆಯ ಸೂಚನಾ ಫಲಕ ಅಳವಡಿಸಬೇಕು; ಅತಿ ವೇಗದ ವಾಹನಗಳು ಇಲ್ಲಿ ತಿರುವು ಪಡೆಯುವಾಗ ಅಪಘಾತ ತಡೆಯಲು ವೇಗ ನಿಯಂತ್ರಕ ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹ ಪಡಿಸುತ್ತಾರೆ.
* ಗುಡುಗಳಲೆ ಗ್ರಾಮ ಅಭಿವೃದ್ಧಿ ಹೊಂದುತ್ತಿದೆ. ಶೀಘ್ರ ವಾಹನಗಳ ವ್ಯವಸ್ಥಿತ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ
ಎಚ್.ಎನ್.ಸಂದೀಪ್, ಅಧ್ಯಕ್ಷ, ಹಂಡ್ಲಿ ಗ್ರಾ.ಪಂ