ADVERTISEMENT

ಅನುದಾನದ ಕೊರತೆ: ಅಭಿವೃದ್ಧಿಗೆ ತೊಡಕು

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶಾಸಕ ಅಪ್ಪಚ್ಚು ರಂಜನ್‌ ಆರೋಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 12:41 IST
Last Updated 29 ಏಪ್ರಿಲ್ 2018, 12:41 IST

ಶನಿವಾರಸಂತೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮಠ, ಮಂದಿರಗಳನ್ನು ಮುಟ್ಟುಗೋಲು ಹಾಕಲು ಚಿಂತನೆ ಮಾಡುವ ಮೂಲಕ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡಿದ್ದರಿಂದಲೇ ರಾಜ್ಯ ಪ್ರಗತಿ ಸಾಧಿಸಿಲ್ಲ ಎಂದು ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ದೂರಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರ ನಡೆದ ಬಿಜೆಪಿ ಬಹಿರಂಗ ಮತಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಕೋಮುಗಲಭೆ, ಅತ್ಯಾಚಾರ, ಕೊಲೆಸುಲಿಗೆ ಮುಂತಾದ ಅಪರಾಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಶಾಂತಿಗೆ ಹೆಸರುವಾಸಿಯಾಗಿದ್ದ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮೂಲಕ ಅಶಾಂತಿ ಹರಡಲು ಕಾರಣರಾದರು ಎಂದು ಆರೋಪಿಸಿದರು.

ADVERTISEMENT

‘ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಲವಾರು ಜನಪ್ರಿಯ ಯೋಜನೆಗಳ ಮೂಲಕ ರಾಜ್ಯ ಮತ್ತು ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿತ್ತು. ನಾನು ಮತ್ತು ಕೆ.ಜಿ.ಬೋಪಯ್ಯ ಶಾಸಕರಾಗಿದ್ದ ವೇಳೆ ₹ 1800 ಕೋಟಿ ಅನುದಾನ ತಂದು ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು, ಸ್ನಾತಕೋತ್ತರ ಕೇಂದ್ರ, ಸೈನಿಕ ಕಾಲೇಜುಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ ಅನುದಾನ ನೀಡದ ಕಾರಣ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಿಲ್ಲ. ಬಿಜೆಪಿಗೆ ಮತ ನೀಡಿ ಸರ್ಕಾರ ರಚಿಸಲು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಬಸವಪಟ್ಟಣ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಯಾವುದೇ ಸರ್ಕಾರವಾಗಲಿ ಸಮಾಜದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕವಾಗಿ ಸಮಾನತೆಯನ್ನು ಕಲ್ಪಿಸಿಕೊಡುವಂತಹ ಆಡಳಿತವನ್ನು ನೀಡಬೇಕು. ಧರ್ಮವನ್ನು ಒಡೆಯುವಂತಹ ಕಾರ್ಯ ಮಾಡಬಾರದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿದರು.

ಪ್ರಮುಖರಾದ ಭರತ್‌ಕುಮಾರ್, ಸರೋಜಮ್ಮ, ಉಷಾ ತೇಜಸ್ವಿ, ಜೆ.ಸಿ.ಶೇಖರ್, ಜಲಜಾ ಶೇಖರ್, ಭುವನೇಶ್ವರಿ, ಎಸ್.ಎನ್.ರಘು, ಕೆ.ವಿ.ಮಂಜುನಾಥ್, ಮಹಮ್ಮದ್ ಗೌಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.