ಕುಶಾಲನಗರ: ಉತ್ತರ ಕೊಡಗಿನ ಕಣಿವೆ ಬಳಿ ಹಾರಂಗಿ ಬಲದಂಡೆ ಕಾಲುವೆಯ ಏರಿಯಲ್ಲಿ ಮಂಗಳವಾರ ರಾತ್ರಿ ಬಿರುಕು ಕಾಣಿಸಿಕೊಂಡು ನೀರು ಪೋಲಾಗುತ್ತಿದೆ.
ಕಣಿವೆ ಗ್ರಾಮದ ಬಳಿ ಕಾವೇರಿ ನದಿಗೆ ನಿರ್ಮಿಸಿರುವ ಹಾರಂಗಿ ಮೇಲ್ಗಾಲುವೆ ಬಳಿ ಇರುವ ಕಾಲುವೆಯಲ್ಲಿ ಮಂಗಳವಾರ ರಾತ್ರಿಯಿಂದ ಈ ಬಿರುಕು ಕಾಣಿಸಿಕೊಂಡಿದೆ. ಈ ನೀರನ್ನು ತಡೆಗಟ್ಟದಿದ್ದಲ್ಲಿ ಬತ್ತದ ಗದ್ದೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ನಷ್ಟ ಸಂಭವಿಸಲಿದೆ ಎಂದು ರೈತರು ಆತಂಕಗೊಂಡಿದ್ದಾರೆ.
ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಹಾರಂಗಿ ನೀರಾವರಿ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಯಾರೂ ಸ್ಪಂದಿಸಿರುವುದಿಲ್ಲ ಎಂದು ಕೃಷಿಕ ಶಿವಣ್ಣ ದೂರಿದ್ದಾರೆ.
ಬಿರುಕನ್ನು ತಕ್ಷಣ ಸರಿಪಡಿಸದಿದ್ದಲ್ಲಿ ಬಲದಂಡೆಯ ಕಾಲುವೆಗೆ ಹರಿಸುತ್ತಿರುವ ನೀರು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು ತಾಲ್ಲೂಕಿನ ಭಾಗದ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಪೋಲಾಗುತ್ತಿರುವ ನೀರು ತಗ್ಗು ಪ್ರದೇಶದ ಗದ್ದೆಗಳಿಗೆ ಹರಿಯುತ್ತಿದ್ದು, ಪಕ್ಕದಲ್ಲೇ ಇರುವ ಕಣಿವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೂ ಸೇರಿಕೊಂಡಿದೆ.
ಕಾಲುವೆಯ ಏರಿಯಲ್ಲಿ ಕಾಣಿಸಿಕೊಂಡಿರುವ ಬಿರುಕನ್ನು ತಕ್ಷಣದಲ್ಲಿ ಮುಚ್ಚದಿದ್ದಲ್ಲಿ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುವ ಸಾಧ್ಯತೆ ಇದೆ. ಕಾಲುವೆಯ ಬಿರುಕನ್ನು ತಕ್ಷಣ ಮುಚ್ಚಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿ.ಪಿ. ಶಶಿಧರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.