ADVERTISEMENT

ಕರ್ನಾಟಕವೀಗ ಅಂಧಕಾರದ ರಾಜ್ಯ- ಸಂಸದ ಎಚ್.ವಿಶ್ವನಾಥ್ ಲೇವಡಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:35 IST
Last Updated 14 ಅಕ್ಟೋಬರ್ 2011, 5:35 IST

ಮಡಿಕೇರಿ: ಕರ್ನಾಟಕ ರಾಜ್ಯ ಅಂಧಕಾರದ ರಾಜ್ಯವಾಗಿದೆ. ಈ ಕಗ್ಗತ್ತಲಿನ ಸಾಮ್ರೋಜ್ಯಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಚಕ್ರವರ್ತಿಯಾಗಿದ್ದಾರೆ ಎಂದು ಸಂಸದ ಎಚ್.ವಿಶ್ವನಾಥ್ ಲೇವಡಿ ಮಾಡಿದರು.

ನಗರದಲ್ಲಿ ಗುರುವಾರ ನಡೆದ ನೆಹರು ಯುವ ಕೇಂದ್ರದ ಕಾರ್ಯಕ್ರಮಕ್ಕಿಂತ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಈಗ ಎದುರಿಸುತ್ತಿರುವ ವಿದ್ಯುತ್ ಕೊರತೆಗೆ ಬಿಜೆಪಿ ಸರ್ಕಾರವೇ ಹೊಣೆ ಎಂದರು.
 ವಿದ್ಯುತ್ ಕಳ್ಳತನ, ಸೋರಿಕೆಯನ್ನು ತಡೆಗಟ್ಟದ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಸುಖಾಸುಮ್ಮನೆ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
 ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ತನ್ನ ಜವಾಬ್ದಾರಿಯನ್ನು ಕೇಂದ್ರದೆಡೆ ವರ್ಗಾಯಿಸಿದರೆ ಸಮಸ್ಯೆ ಪರಿಹಾರವಾಗಲ್ಲ ಎಂದರು.

 ಮುಖ್ಯಮಂತ್ರಿ ಅವರು ವಿದ್ಯುತ್ ಸಮಸ್ಯೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಹೇಳುತ್ತಿದ್ದಾರೆ. ಆದರೆ, ಹಿಂದಿನ ಸರ್ಕಾರದಲ್ಲಿ ಕೂಡ ಇವರ ಪಕ್ಷದವರೇ ಆಡಳಿತ ನಡೆಸಿದ್ದಲ್ಲವೇ? ಆ ಸಮಯದಲ್ಲೂ ಶೋಭಾ ಕರಂದ್ಲಾಜೆ ವಿದ್ಯುತ್ ಸಚಿವೆ ಆಗಿರಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.

 ಪ್ರಸ್ತುತ ಇರುವ ಬಿಜೆಪಿ ಸರ್ಕಾರವು ತನ್ನ ಅಧಿಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ ಒಂದೇ ಒಂದು ಮೆಗಾವಾಟ್ ವಿದ್ಯುತ್ ತಯಾರಿಸಿಲ್ಲ. ಮುಂಜಾಗ್ರತವಾಗಿ ಕಲ್ಲಿದ್ದಲು ಖರೀದಿಸುವುದು, ಸಂಗ್ರಹಿಸುವುದರ ಬಗ್ಗೆ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.