ADVERTISEMENT

ಕಾಫಿ ಅಭಿವೃದ್ಧಿಗೆ ಚಿಂತನ-ಮಂಥನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2011, 9:25 IST
Last Updated 17 ನವೆಂಬರ್ 2011, 9:25 IST
ಕಾಫಿ ಅಭಿವೃದ್ಧಿಗೆ ಚಿಂತನ-ಮಂಥನ
ಕಾಫಿ ಅಭಿವೃದ್ಧಿಗೆ ಚಿಂತನ-ಮಂಥನ   

ಅಮ್ಮತ್ತಿ: ಕಾಫಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಳೆಗಾರರು ಹಾಗೂ ಪರಿಣತರ ನಡುವೆ ಅರ್ಥಪೂರ್ಣ ಚರ್ಚೆಗೆ ಅಮ್ಮತ್ತಿಯಲ್ಲಿ ನಡೆದ `ಕಾಫಿ ಇನ್ನೊವೇಶನ್ಸ್~ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತು.

ಸಮಾವೇಶವನ್ನು ಪೊನ್ನಂಪೇಟೆಯ ಕಾಲೇಜ್ ಆಫ್ ಫಾರೆಸ್ಟ್ರಿಯ ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆಯು ಹಮ್ಮಿಕೊಂಡಿತ್ತು.

ಕಾಫಿ ಬೆಳೆಯೇ ಪ್ರಮುಖವಾಗಿರುವ ದಕ್ಷಿಣ ಕೊಡಗಿನ ಅಮ್ಮತ್ತಿಯಲ್ಲಿ ಮಂಗಳವಾರ ನಡೆದ ಈ ಸಮಾವೇಶದಲ್ಲಿ ಪಾಲ್ಗೊಂಡ ನೂರಾರು ರೈತರು ತಮ್ಮ ಸಂದೇಹಗಳನ್ನು ಪರಿಣತರಿಂದ ಬಗೆಹರಿಸಿಕೊಂಡರು.

ತಜ್ಞರ ಸಲಹೆಯನ್ನು ಅನುಸರಿಸಲು, ಹೊಸ ಆವಿಷ್ಕಾರಕ್ಕೆ ಒಡ್ಡಿಕೊಳ್ಳಲು ಬಹುತೇಕ ರೈತರು ಆಸಕ್ತಿ ತೋರಿದರು.
ಉದ್ಘಾಟನಾ ಸಮಾರಂಭದಲ್ಲಿ ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆಯ ಅಧ್ಯಕ್ಷ ಎ.ಎ. ಚೆಂಗಪ್ಪ, ಉಪಾಧ್ಯಾಕ್ಷರಾದ ಪಿ.ಎಸ್. ಸುಬ್ರಮಣಿ,  ಬಿ.ಸಿ. ನಂಜಪ್ಪ,  ಕಾರ್ಯದರ್ಶಿ ಕೆ.ಆರ್.ಬಾಬು, ಇತ ರರು ಮಾತನಾಡಿ, ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿ ರುವುದಕ್ಕೆ ಪರ‌್ಯಾಯ ಮಾರ್ಗಗಳನ್ನು ಕಂಡುಕೊಳ್ಳ ಬೇಕಾಗಿದೆ ಎಂದರು.

ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಳ್ಳುವುದರ ಬಗ್ಗೆ, ಕಾಫಿ ಉತ್ಪಾದನೆ ಹೆಚ್ಚಿಸುವ ರಸಗೊಬ್ಬರ ಬಳಕೆ, ನೀರಾವರಿ ವ್ಯವಸ್ಥೆ ಕಲ್ಪಿಸುವುದು, ಮಾರುಕಟ್ಟೆಯ ಸ್ಥಿತಿಗತಿ ಹಾಗೂ ಮಾರುಕಟ್ಟೆಯಲ್ಲಿರುವ ಪ್ರಮುಖ ಕಂಪೆನಿಗಳಿಂದ ಕಾಫಿಯ ಗುಣಮಟ್ಟದ ಬಗ್ಗೆ ಸರ್ಟಿಫಿಕೇಟ್ ಪಡೆಯವುದರ ಬಗ್ಗೆಯೂ ಚರ್ಚೆಗಳು ನಡೆದವು.

ಪ್ರಮಾಣೀಕೃತ ಕಾಫಿ: ಗಿಡಗಳ ನೆರಳಿನಲ್ಲಿ ಬೆಳೆಯಲಾಗುವ ಕೊಡಗಿನ ಕಾಫಿಗೆ ವಿಶ್ವ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ ಎಂದು ಕಾಫಿ ಉದ್ಯಮಿ ಲೂಯಿಸ್ ಕಾರ್ಲೋಸ್ ಹೇಳಿದರು.

ಮಾರುಕಟ್ಟೆಯಲ್ಲಿ ಖ್ಯಾತಿಗಳಿಸಿರುವ ಸಂಸ್ಥೆಯ ವತಿಯಿಂದ ಕಾಫಿ ಗುಣಮಟ್ಟದ ಬಗ್ಗೆ ಸರ್ಟಿಫಿಕೇಟ್ ಪಡೆದುಕೊಂಡರೇ ಇನ್ನೂ ಉತ್ತಮ ಬೆಲೆ ದೊರಕುತ್ತದೆ ಎಂದು  ಅವರು ಹೇಳಿದರು.

ಸಬ್ಸಿಡಿ:  ಕಾಫಿ  ಮಂಡಳಿ ವತಿಯಿಂದ ರೈತರಿಗೆ ನೀಡಲಾಗುವ ಸಬ್ಸಿಡಿ ಹಾಗೂ ಇತರ ಎಲ್ಲ ಪ್ರಯೋಜನಗಳನ್ನು ರೈತರು ಪಡೆದುಕೊಳ್ಳಬೇಕು ಎಂದು ಹಾಸನ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಜಂಟಿ ನಿರ್ದೇಶಕರಾದ ಎಂ.ಸಿ.ಪೊನ್ನಣ್ಣ ಕೋರಿದರು.

ಯಾವುದೇ ಕಂಪೆನಿಗಳಿಂದ ಯಂತ್ರೋಪಕರಣಗಳನ್ನು ಖರೀದಿ ಮಾಡಲು ರೈತರು ಸಂಪೂರ್ಣವಾಗಿ ಸ್ವತಂತ್ರರಾಗಿದ್ದಾರೆ. ಆದ್ದರಿಂದ ಉತ್ತಮ ಕಂಪೆನಿಗಳ ಯಂತ್ರಗಳನ್ನೇ ಖರೀದಿಸಿ, ನಂತರ ಅದರ ರಸೀದಿಯನ್ನು ಕಾಫಿ ಮಂಡಳಿಗೆ ತಲುಪಿಸಿದರೆ ಸಬ್ಸಿಡಿ ಹಣ ನೀಡಲಾಗುತ್ತದೆ ಎಂದರು.

ಡಾ. ಆನಂದ್ ಟೈಟಾಸ್ ಅವರು  ತುಂತುರು ನೀರು ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕೆಪಿಎ ಮಾಜಿ ಅಧ್ಯಕ್ಷ ಸಹದೇವ ಬಾಲಕೃಷ್ಣ ಅವರು ವಿಯೆಟ್ನಾಂ ದೇಶದಲ್ಲಿ ಅಳವಡಿಸಲಾಗುತ್ತಿರುವ ಕಾಫಿ ಬೇಸಾಯ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ರಸಗೊಬ್ಬರ ಮಹತ್ವದ ಬಗ್ಗೆ ಡಾ.ಶ್ರೀಕಾಂತ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.