ADVERTISEMENT

ಕಾಫಿ ಬೆಳೆಗಾರರಿಗೆ ವಿಶೇಷ ಸೌಲಭ್ಯ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 6:20 IST
Last Updated 22 ಅಕ್ಟೋಬರ್ 2011, 6:20 IST

ಮಡಿಕೇರಿ: ಮುಂಬರುವ ಏಪ್ರಿಲ್‌ನಿಂದ ಜಾರಿಗೆ ಬರುವ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಬೆಳೆಗಾರರಿಗೆ ವಿಶೇಷ ಸವಲತ್ತುಗಳನ್ನು ನೀಡಬೇಕೆಂದು ಯೋಜನಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ 11ನೇ ಪಂಚವಾರ್ಷಿಕ ಯೋಜನೆಯಡಿ ಸಣ್ಣ ಹಾಗೂ ಮಧ್ಯಮ ಕಾಫಿ ಬೆಳೆಗಾರರಿಗೆ ವಿವಿಧ ಯೋಜನೆಯಡಿ ನೀಡಲಾಗಿದ್ದ ಶೇ 25ರ ಸಬ್ಸಿಡಿ ದರವನ್ನು ಈಗ ಶೇ 70ರಷ್ಟು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಇದಲ್ಲದೇ, 20 ಹೆಕ್ಟೇರ್‌ಕ್ಕಿಂತ ಹೆಚ್ಚು ತೋಟ ಹೊಂದಿರುವ ಕಾಫಿ ಬೆಳೆಗಾರರಿಗೆ ಶೇ 50ರಷ್ಟು ಸಬ್ಸಿಡಿ ನೀಡಬೇಕು ಎಂದರು.

ಮುಖ್ಯವಾಗಿ ಯಂತ್ರೋಪಕರಣಗಳ ಖರೀದಿ, ಕಾಫಿ ಗಿಡಗಳನ್ನು ಪುನಃ ನೆಡುವುದಕ್ಕೆ ಹಾಗೂ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಹೆಚ್ಚಿನ ಸಹಾಯ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಾಫಿ ಮಂಡಳಿಯ ಸದಸ್ಯ ನಂದಾ ಬೆಳ್ಯಪ್ಪ ಮಾತನಾಡಿ, ಕಾಫಿ ಮಂಡಳಿಗಾಗಿ 12ನೇ ಪಂಚವಾರ್ಷಿಕ ಯೋಜನೆಯಡಿ ರೂ 1,800 ಕೋಟಿ ಮೀಸಲು ಇಡಬೇಕು ಎಂದು ಯೋಜನಾ ಆಯೋಗವನ್ನು ಒತ್ತಾಯಿಸಿದರು.
ಕಾಫಿ ಬೆಳೆಗಾರರಿಗೆ ಅವಶ್ಯಕವಾಗಿರುವ ಯೋಜನೆಗಳ ಬಗ್ಗೆ ಈಗಲೇ ಕಾಫಿ ಮಂಡಳಿ ಹಾಗೂ ಯೋಜನಾ ಆಯೋಗಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಆದ್ದರಿಂದ ಕಾಫಿ ಬೆಳೆಗಾರರ ಒಕ್ಕೂಟಗಳು ಆಯೋಗಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಬೇಕು ಎಂದು ಅವರು ಕೋರಿದರು.

ಕೊಡಗಿನ ಕೃಷಿ ಜಮೀನನ್ನು ಹಣದ ಆಸೆಗೆ ಕಂದಾಯ ಅಧಿಕಾರಿಗಳು ಭೂ ಕಾಯ್ದೆಗಳನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.