ADVERTISEMENT

ಕಾವೇರಿ ತೀರ್ಥ ವಿತರಣೆ, ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 7:35 IST
Last Updated 18 ಅಕ್ಟೋಬರ್ 2012, 7:35 IST

ಕುಶಾಲನಗರ: ತಲಕಾವೇರಿಯಲ್ಲಿ ಬುಧವಾರ ಬೆಳಿಗ್ಗೆ ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಸಂಗ್ರಹಿಸಿದ ತೀರ್ಥವನ್ನು ಇಲ್ಲಿಯ ಕಾವೇರಿ ನದಿಯ ಸೇತುವೆ ಬಳಿ ಕಾವೇರಿ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ಭಕ್ತಾದಿಗಳಿಗೆ ವಿತರಿಸಲಾಯಿತು.

ತುಲಾ ಸಂಕ್ರಮಣದ ಅಂಗವಾಗಿ ಸಮಿತಿ ವತಿಯಿಂದ ನಾಗರಿಕರಿಗೆ ಕಾವೇರಿ ತೀರ್ಥ ವಿತರಿಸಿ ನಂತರ ಅನ್ನ ಸಂತರ್ಪಣೆ  ಮಾಡಲಾಯಿತು.

ಕಾವೇರಿ ತೀರ್ಥ ಸ್ವೀಕರಿಸಿ ಮಾತನಾಡಿದ ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ಸಮಿತಿ ವತಿಯಿಂದ ಮೈಸೂರು ಜಿಲ್ಲೆಯಿಂದ ಕೊಡಗಿಗೆ ನದಿ ಮೂಲಕ ಪ್ರವೇಶಿಸುವ ಜಾಗದಲ್ಲಿ ನಿರ್ಮಿಸಲುದ್ದೇಶಿಸಿರುವ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ತಾವು ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಜೀವನದಿ ಕಾವೇರಿಯಿಂದ ನಾಡಿನ ಜನತೆಗೆ ಸುಭೀಕ್ಷೆ, ಸುಖ - ಶಾಂತಿ, ನೆಮ್ಮದಿ ಲಭಿಸಲಿ                        ಎಂದು ಎಚ್.ಡಿ.ಗಣೇಶ್ ನುಡಿದರು. ಸಮಿತಿಯ ಅಧ್ಯಕ್ಷ ಬಬೀಂದ್ರಪ್ರಸಾದ್ ಸಮಿತಿ ವತಿಯಿಂದ ರೂ.15 ಲಕ್ಷ ವೆಚ್ಚದಲ್ಲಿ ಕುಶಾಲನಗರ ಪಟ್ಟಣದ ಪ್ರವೇಶ ದ್ವಾರವಾದ ನದಿದಂಡೆಯ ಸೇತುವೆ ಬಳಿ ನಿರ್ಮಿಸಲಿರುವ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ದಾನಿಗಳ ಸಹಕಾರ  ಕೋರಿದರು.

ಉದ್ಯಮಿಗಳಾದ ಎಸ್‌ಎಲ್‌ಎನ್ ಕಾಫಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪನ್, ಸಮಿತಿಯ ಪದಾಧಿಕಾರಿಗಳಾದ ರವೀಂದ್ರಪ್ರಸಾದ್, ಚಂದ್ರಮೋಹನ್, ವಿಜೇಂದ್ರಪ್ರಸಾದ್, ವನಿತಾ, ವಿವಿಧ ಸಂಘಟನೆಯ ಪ್ರಮುಖರಾದ ಪಿ.ಕೆ.ಜಗದೀಶ್, ಎಂ.ಕೃಷ್ಣ, ಅಣ್ಣಯ್ಯ, ದಿನೇಶ್, ವಿಶ್ವಕುಮಾರ್, ಕೆ.ಎಸ್.ರುದ್ರಪ್ಪ ಇದ್ದರು.

ಗಜಾನನ ಯುವಕ ಸಂಘ
ನಾಪೋಕ್ಲು: ಮೂರ್ನಾಡಿನ ಗಜಾನನ ಯುವಕ ಸಂಘದ ವತಿಯಿಂದ ಬುಧವಾರ ಕಾವೇರಿ ತೀರ್ಥವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು.

ಮೂರ್ನಾಡಿನ ಅಯ್ಯಪ್ಪ ದೇವಾಲಯದ ಬಳಿ, ಮೂರ್ನಾಡಿನ ಬಸ್ ನಿಲ್ದಾಣ, ಸುಭಾಷ್ ನಗರ, ಗಾಂಧಿ ನಗರ, ಶಾಸ್ತ್ರಿ ನಗರ ಹಾಗೂ ವೆಂಕಟೇಶ್ವರ ಕಾಲೊನಿಗಳಿಗೆ ವಾಹನದಲ್ಲಿ ತೆರಳಿ ತೀರ್ಥ ವಿತರಿಸಲಾಯಿತು. ಈ ಸಂದರ್ಭ ಗಜಾನನ ಯುವಕ ಸಂಘದ ಅಧ್ಯಕ್ಷ ಎ.ಕೆ. ಪೃಥ್ವಿ ಹರೀಶ್, ಉಪಾಧ್ಯಕ್ಷ ನವೀನ್ ಕುಮಾರ್, ಗೌರವಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಅಯ್ಯಪ್ಪ, ಸ್ಥಾಪಕ ಅಧ್ಯಕ್ಷ ಪುದಿಯೊಕ್ಕಡ ರಮೇಶ್, ಮಾಜಿ ಅಧ್ಯಕ್ಷ ಸಿ.ಎಲ್. ಜಯಂತ್ ಹಾಗೂ ಸಂಘದ ಸದಸ್ಯರು ಇದ್ದರು.

ವಿ.ಫ್ರೆಂಡ್ಸ್ ಸಂಸ್ಥೆ 
ವಿರಾಜಪೇಟೆ: ಇಲ್ಲಿಯ ವಿ.ಫ್ರೆಂಡ್ಸ್ ಸಂಸ್ಥೆ ವತಿಯಿಂದ ತಲಕಾವೇರಿಯಿಂದ ತಂದ ಕಾವೇರಿ ತೀರ್ಥವನ್ನು ಬುಧವಾರ ಮೆರವಣಿಗೆಯ ಮೂಲಕ ವಿವಿಧ ಬೀದಿಗಳಲ್ಲಿ ಭಕ್ತಾದಿಗಳಿಗೆ ವಿತರಿಸಲಾಯಿತು.

ಇಲ್ಲಿಯ ಕೊಡವ ಸಮಾಜದ ಬಳಿಯಲ್ಲಿ ಹೂವಿನ ಅಲಂಕೃತ ಮಂಟಪದಲ್ಲಿ ಕಾವೇರಿ ಮಾತೆಯ ವಿಗ್ರಹವನ್ನು ಕೂರಿಸಿ ಬೆಳಿಗ್ಗೆ 10ಗಂಟೆಗೆ ಕಾವೇರಿ ತೀರ್ಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ ಅಪ್ಪಯ್ಯ ಸ್ವಾಮಿ ರಸ್ತೆ, ದಖ್ಖನಿ ಮೊಹಲ್ಲಾ, ತೆಲುಗರ ಬೀದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಮಾರ್ಗವಾಗಿ ಮುಖ್ಯ ಬೀದಿಗಳಲ್ಲಿ ಕಾವೇರಿ ತೀರ್ಥ ವಿತರಿಸಲಾಯಿತು.

ಸಂಸ್ಥೆಯ ಮೋಹನ್ ಉತ್ತಪ್ಪ, ಪ್ರತಾಪ್, ಕೆ.ಸುರೇಶ್, ಸಂಪಿ ಪೂಣಚ್ಚ, ಅಪ್ಪನೆರವಂಡ ವಿಜಯ್, ಪಟ್ಟಡ ವಿಜು, ಜೀವನ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.