ADVERTISEMENT

ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ; ಅ.15ರ ವರೆಗೆ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 8:35 IST
Last Updated 17 ಸೆಪ್ಟೆಂಬರ್ 2011, 8:35 IST

ಮಡಿಕೇರಿ: ಕೃಷಿ ಸಾಲ ಪಡೆಯಲು ರೈತರಿಗೆ ಅವಶ್ಯಕವಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ವಿತರಿಸುವ ಅಂತಿಮ ದಿನಾಂಕವನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಲಾಗಿದ್ದು, ಈ ಅವಧಿಯೊಳಗೆ ಶೇ 100ರಷ್ಟು ರೈತರಿಗೆ ಈ ಸೌಲಭ್ಯವನ್ನು ದೊರಕುವಂತೆ ಮಾಡಬೇಕಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಹೇಳಿದರು.

ನಗರದ ಕಾರ್ಪೋರೇಷನ್ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಬ್ಯಾಂಕುಗಳಲ್ಲಿ ಇದುವರೆಗೆ ಬೆಳೆ ಸಾಲ ಪಡೆಯದಿರುವ ಜಿಲ್ಲೆಯ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಕಾರ್ಯವನ್ನು ಕೃಷಿ ಇಲಾಖೆಯ ಜೊತೆ ಸೇರಿಕೊಂಡು ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕುಗಳ ಸಿಬ್ಬಂದಿ ಮಾಡಬೇಕಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಅಂತಹ ಯೋಜನೆಗಳನ್ನು ಬ್ಯಾಂಕುಗಳ ಮೂಲಕ ಅನುಷ್ಠಾನ ತಲುಪಿಸಬೇಕಾಗಿದೆ ಎಂದರು.

ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾದ ಅರುಣಾಚಲ ಶರ್ಮ ಮಾತನಾಡಿ, ರೈತರಿಗೆ ಅನುಕೂಲವಾಗಲು ಕನ್ನಡ ಭಾಷೆಯಲ್ಲಿ ಸರಳೀಕರಿಸಿದ ಬೆಳೆಸಾಲ ಅರ್ಜಿಯನ್ನು ನೀಡಲಾಗುತ್ತಿದೆ. ಅರ್ಜಿ ಫಾರಂನ್ನು ಎಲ್ಲಾ ಬ್ಯಾಂಕುಗಳಿಗೆ ತಲುಪಿಸಲಾಗುವುದು. ಆಯಾ ಬ್ಯಾಂಕುಗಳು ತಮ್ಮ ಶಾಖಾ ಬ್ಯಾಂಕ್‌ಗಳಿಗೆ ವಿತರಿಸಿ ರೈತರಿಗೆ ಬೆಳೆಸಾಲ ಕಲ್ಪಿಸುವಂತೆ ಮಾಡಬೇಕು ಎಂದು ಅರುಣಾಚಲ ಶರ್ಮ ತಿಳಿಸಿದರು.

ರೈತರಿಗೆ ಬೆಳೆಸಾಲ ನೀಡುವಾಗ ಯಾವುದೇ ರೀತಿಯ ಶುಲ್ಕ ಪಡೆಯುವಂತಿಲ್ಲ, ಬೇರೆ ಬ್ಯಾಂಕುಗಳಿಂದ ಬಾಕಿ ಪತ್ರ ಪಡೆಯುವ ಅವಶ್ಯಕತೆಯೂ ಇಲ್ಲ (ನೋ ಡ್ಯೂ), ಬೆಳೆಸಾಲ ನೀಡುವ ಸಂದರ್ಭದಲ್ಲಿ ಆರ್.ಟಿ.ಸಿ ಪಡೆದರೆ ಸಾಕು ಎಂದು ಅವರು ತಿಳಿಸಿದರು.

ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ ಕೃಷಿ ಕ್ಷೇತ್ರಕ್ಕೆ ರೂ 1,13,576.06 ಲಕ್ಷ ಗುರಿಯಲ್ಲಿ ರೂ 26,647.25 ಲಕ್ಷ  ಸಾಲ ವಿತರಣೆ ಮಾಡಿ ಶೇ. 23 ರಷ್ಟು ಸಾಧನೆ ಮಾಡಲಾಗಿದೆ ಎಂದರು. ಅತಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ರೂ  2,080.19 ಗುರಿಯಲ್ಲಿ ರೂ 523.44 ಲಕ್ಷ ಸಾಲ ನೀಡಲಾಗಿದ್ದು, ಶೇ. 25ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಕಾರ್ಪೋರೇಷನ್ ಬ್ಯಾಂಕಿನ ಮೈಸೂರು ವಲಯದ ಉಪ ಮಹಾ ಪ್ರಬಂಧಕರಾದ ಲಕ್ಷ್ಮೀನಾಥ ರೆಡ್ಡಿ, ರಿಸರ್ವ್ ಬ್ಯಾಂಕಿನ ಪ್ರತಿನಿಧಿ ಜಿ.ಎಚ್.ರಾವ್, ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕರಾದ ಶಿವರಾಮ ಕೃಷ್ಣನ್ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.