ADVERTISEMENT

ಕೊಡಗು ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ:ಮಟ್ಟಾನೂರ್ ವಿಮಾನ ನಿಲ್ದಾಣ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:40 IST
Last Updated 17 ಆಗಸ್ಟ್ 2012, 9:40 IST

ಗೋಣಿಕೊಪ್ಪಲು: ಕೊಡಗಿನ ಗಡಿ ಭಾಗ ಕೇರಳದ ಮಟ್ಟಾನೂರಿನಲ್ಲಿ ಸ್ಥಾಪನೆಗೊಳ್ಳಲಿರುವ ಕಣ್ಣಾನೂರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಲಿದೆ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪ್ರಕಾಶ್ ಹೇಳಿದರು.

ಕಣ್ಣಾನೂರ್ ನಾರ್ತ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಮಂಗಳವಾರ ಕಣ್ಣಾನೂರಿನಲ್ಲಿ ಆಯೋಜಿಸಿದ್ದ ವೈನಾಡ್, ಕ್ಯಾಲಿಕಟ್ ಹಾಗೂ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಪದಾಧಿಕಾರಿಗಳ ಸಭೆಯಲ್ಲಿ ಪ್ರಕಾಶ್ ಮಾತನಾಡಿದರು.

ಮಟ್ಟಾನೂರಿನಿಂದ ಕೊಡಗಿನ ಗಡಿ ಪ್ರದೇಶಕ್ಕೆ ಕೇವಲ 50 ಕಿ.ಮೀ. ದೂರವಿದೆ.  ಒಂದು ಗಂಟೆ ಅವಧಿಯ ಪ್ರಯಾಣವಾದ್ದರಿಂದ ಕೊಡಗಿಗೆ ಬಹಳಷ್ಟು ಪ್ರವಾಸಿಗರು ಆಗಮಿಸ ಲಿದ್ದಾರೆ.ಇದೀಗ ಕೊಡಗಿಗೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತ 6 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗಿದೆ.

ಮಟ್ಟಾನೂರು ವಿಮಾನ ನಿಲ್ದಾಣ ಪೂರ್ಣಗೊಂಡರೆ ಕೇವಲ 1ಗಂಟೆ ಅವಧಿ ಸಾಕು ಎಂದು ಹೇಳಿದರು.
ಪ್ರವಾಸಿಗರಿಗೆ ಲಭಿಸುವ ಪ್ರಯಾಣ ಸೌಲಭ್ಯದಿಂದ ಕೊಡಗಿನ ಹೋಟೆಲ್ ಉದ್ಯಮ, ಹೋಂ ಸ್ಟೇ ಅಭಿವೃದ್ಧಿಯಾಗಲಿದೆ.

 ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾದ ಮೆಣಸು, ಏಲಕ್ಕಿ ಮೊದಲಾದವುಗಳ ವ್ಯಾಪಾರ-ವಹಿವಾಟು ಹೆಚ್ಚಲಿದೆ. ಕೊಡಗಿನ ಮತ್ತೊಂದು ಅಂತರ ರಾಷ್ಟ್ರೀಯ ಕೃಷಿಯಾದ ಆಂಥೋರಿಯಂ ಹೂವಿಗೂ ಬೇಡಿಕೆ ಹೆಚ್ಚಲಿದೆ ಎಂದು ತಿಳಿಸಿದರು.

ಭಾರಿ ಪ್ರಮಾಣದ ಸರಕು ಸಾಗಿಸಲು ಮಂಗಳೂರಿನ ಹಡಗು ಬಂದರ್‌ಗೆ 4ಗಂಟೆ ಅವಧಿ ದೂರ ಕ್ರಮಿಸಿ ಸಾಗಬೇಕಾಗಿದೆ.ಮಟ್ಟಾನೂರಿನ ವಿಮಾನ ನಿಲ್ದಾಣದಿಂದ ಬಹಳಷ್ಟು ಸಮಯ ಉಳಿತಾಯವಾಗಲಿದೆ ಎಂದು  ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಸ್ಥೆಯ ಮಂಗಳೂರು ವಿಭಾಗದ ಅಧ್ಯಕ್ಷ ಕೊಡಗು ಚೇಂಬರ್ ಆಫ್ ಕಾಮರ್ಸ್‌ನ ಮಾಜಿ ಅಧ್ಯಕ್ಷ  ಕೆ.ಬಿ.ಗಿರೀಶ್ ಗಣಪತಿ ಮಾತನಾಡಿ ದೇಶ ವಿದೇಶಗಳಲ್ಲಿ ನೆಲೆಸಿರುವ ಕೊಡಗಿನ  ಮಕ್ಕಳು  ತಮ್ಮ ಊರಿಗೆ  ಬಂದು ಹೋಗುವುದಕ್ಕೆ ಅನುಕೂಲ ವಾಗಲಿದೆ. ತೋಟಗಾರಿಕೆ, ಕೃಷಿ, ಹೈನುಗಾರಿಕೆ ಹಾಗೂ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

ಕಣ್ಣಾನೂರ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ  ಕಣ್ಣಾನೂರ್ ಜಿಲ್ಲಾಧಿಕಾರಿ ಡಾ.ರಥನ್ ಕೇಳ್ಕರ್ ಮಾತನಾಡಿ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ 2 ಸಾವಿರ ಎಕರೆ ಪ್ರದೇಶದಲ್ಲಿ ಈಗಾಗಲೇ  1,275 ಎಕರೆ  ಪ್ರದೇಶ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಪರಿಸರ ಇಲಾಖೆಯ ಅನುಮತಿ ದೊರೆತಿದೆ ಎಂದರು.

ಒಟ್ಟು ರೂ. 1,414 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ನಿಲ್ದಾಣ 3,400 ಮೀಟರ್ ರನ್‌ವೇ ಹೊಂದಿರುತ್ತದೆ. ಇದನ್ನು 2015 ರವೇಳೆಗೆ ಪೂರ್ಣಗೊಳಿಸಲಾಗುವುದು ಎಂದರು.ಕೇರಳದ ಮುಖ್ಯ ಮಂತ್ರಿ ಓಮನ್ ಚಾಂಡಿ ಕೆಐಎಎಲ್  (ಕಣ್ಣಾನೂರ್ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟಿಡ್)ನ ಅಧ್ಯಕ್ಷರು, ಕೆ.ಬಾಬು, ಕೆ.ಎಂ. ಮಣಿ, ಪಿ.ಕೆ. ಕುನ್‌ಹಳಿಕುಟ್ಟಿ, ಕೆ.ಸಿ. ಜೋಸೆಫ್, ಪಿ.ಕೆ. ಮೋಹನ್, ವಿ ಪಿ.ಜೋಯ್, ಟೋಮ್ ಜೋಸ್. ಎಸ್.ರಾಮನಾಥ್ ನಿರ್ದೇಶಕರು, ವಿ ತುಳಿಸಿದಾಸ್ ವ್ಯವಸ್ಥಾಪಕ  ನಿರ್ದೇಶಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.