ಮಡಿಕೇರಿ:‘ಅಪ್ಪಚ್ಚ ಕವಿಯು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಸ್ಮರಿಸಿದರು.ನಗರದ ಕೊಡವ ಸಮಾಜದಲ್ಲಿ ಅಖಿಲ ಕೊಡವ ಸಮಾಜ ಹಾಗೂ ಮಡಿಕೇರಿ ಕೊಡವ ಸಮಾಜದ ಆಶ್ರಯದಲ್ಲಿ ಶುಕ್ರವಾರ ನಡೆದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಜನ್ಮೋತ್ಸವದಲ್ಲಿ ಅವರು ಮಾತನಾಡಿದರು.
ಅಪ್ಪಚ್ಚಕವಿ ಸಾಹಿತ್ಯ ಕೃತಿಗಳನ್ನು ಯುವಕರು ಹೆಚ್ಚು ಓದಬೇಕು. ಅದರಲ್ಲಿ ಜೀವನದ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೋರಿದರು.
ಅಪ್ಪಚ್ಚಕವಿ ಕೊಡಗಿನಲ್ಲೇ ಜನಿಸಿದವರು. ಸಾಹಿತ್ಯ ಕೃತಿ, ನಾಟಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಬರಹಗಳು ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಮೊಟ್ಟ ಮೊದಲ ಬಾರಿಗೆ ನಾಟಕವನ್ನು ಕೊಡವ ಭಾಷೆಯಲ್ಲಿ ರಚಿಸಿ, ಅದನ್ನು ಅಭಿನಯಿಸಿದರು. ಹಾಗಾಗಿ, ಕೊಡವ ಭಾಷೆಯ ಆದಿಕವಿ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.ವಿವಿಧ ರಾಗಗಳಲ್ಲಿ ಹಾಡಿದ ಮಹಾನ್ ವ್ಯಕ್ತಿ ಅಪ್ಪನೆರವಂಡ ಅಪ್ಪಚ್ಚಕವಿ. ಅವರ ಕೊಡುಗೆಯನ್ನು ಇಂದಿನ ಯುವ ಜನಾಂಗ ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ಅಪ್ಪಚ್ಚಕವಿ ಸಾಧನೆಯನ್ನು ನಾಡಿಗೆ ಪರಿಚಯಿಸುವ ದೃಷ್ಟಿಯಿಂದ ತಿಂಗಳಿಗೊಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದಕ್ಕೆ ಸಮಾಜದ ಎಲ್ಲ ವರ್ಗಗಳ ಸಹಕಾರವು ಅಗತ್ಯ ಎಂದು ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಕೋರಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ, ಗೌರವ ಕಾರ್ಯದರ್ಶಿ ಅರೆಯಡ ರಮೇಶ್, ನಿರ್ದೇಶಕ ರಾಜಾ ಮಾದಪ್ಪ, ಗಾಯಕ ಮದ್ರಿರ ಸಂಜು ಬೆಳ್ಯಪ್ಪ, ಆಂಗಿರ ಕುಸುಮ್ ಉಪಸ್ಥಿತರಿದ್ದರು.ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಶಿಕ್ಷಕಿ ಮಾದೇಟಿರ ಪ್ರಮೀಳಾ ಜೀವನ್ ನಿರ್ದೇಶನದ ‘ಬ್ರಹ್ಮ ತೀರ್ಥ’ ನಾಟಕ ಪ್ರದರ್ಶನ ನಡೆಯಿತು.
ಜಿಲ್ಲೆಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ನೇತೃತ್ವದಲ್ಲಿ ಕವಿಯ ಹಾಡುಗಳ ಮೂಲಕ ‘ಕವಿ ಕಾವ್ಯ ನಿರೂಪಣೆ’ ನಡೆಯಿತು. ಮಾದೇಟಿರ ಪಿ. ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.