ಮಡಿಕೇರಿ: ವೈದ್ಯಕೀಯ ನಿಯಂತ್ರಣ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ವೈದ್ಯರು ಕರೆ ನೀಡಿರುವ ಪ್ರತಿಭಟನೆಗೆ ಕೊಡಗು ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಯಿತು. ನಗರ ಖಾಸಗಿ ಆಸ್ಪತ್ರೆಗಳನ್ನು ಶುಕ್ರವಾರ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ಇದರಿಂದಾಗಿ ರೋಗಿಗಳು ಪರದಾಟ ನಡೆಸಬೇಕಾಯಿತು.
ಬಂದ್ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಎರಡು ದಿನಗಳ ಹಿಂದೆ ಪ್ರಕಟಣೆ ನೀಡಿದ್ದ ಹಿನ್ನೆಲೆಯಲ್ಲಿ ರೋಗಿಗಳಿಗೆ ಯಾವುದೇ ತೊಂದರೆ ಆಗಿಲ್ಲ. ಕೆಲವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿದರು. ಶನಿವಾರದಿಂದ ಮತ್ತೆ ಖಾಸಗಿ ಆಸ್ಪತ್ರೆಗಳು ಆರಂಭಗೊಳ್ಳಲಿವೆ ಎಂದು ಭಾರತೀಯ ವೈದ್ಯ ಸಂಘದ ಜಿಲ್ಲಾ ಪದಾಧಿಕಾರಿಗಳು ತಿಳಿಸಿದ್ದಾರೆ.
5 ಆಸ್ಪತ್ರೆ ಬಂದ್
ಶನಿವಾರಸಂತೆ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೆಪಿಎಂಇ ಕಾಯ್ದೆಯ ಕೆಲ ಅಂಶಗಳನ್ನು ಕೈ ಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ಕರೆ ನೀಡಿದ್ದ ಕಾರಣ ಶುಕ್ರವಾರ ಪಟ್ಟಣದ 5 ಖಾಸಗಿ ಕ್ಲಿನಿಕ್ ಗಳು ಸೇವೆ ಸ್ಥಗಿತಗೊಳಿಸಿದ್ದವು.
ರಾಘವೇಂದ್ರ ಕ್ಲಿನಿಕ್ ಮಾತ್ರ ತೆರೆದಿತ್ತು. ಪಟ್ಟಣದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು ಒಬ್ಬ ವೈದ್ಯರು ಮಾತ್ರ ಇರುವ ಕಾರಣ ರೋಗಿಗಳಿಗೆ ಸಮಸ್ಯೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.